ಹಲಗೂರು: ಕಳೆದ ಎಂಟು ವರ್ಷಗಳ ಹಿಂದೆ ಆರಂಭವಾದ ಜನಶ್ರೇಯೋಭಿವೃದ್ಧಿ ಸಹಕಾರ ಸಂಘಕ್ಕೆ ₹15 ಲಕ್ಷ ಲಾಭ ಬಂದಿದ್ದು, ಮುಂದಿನ ದಿನಗಳಲ್ಲಿ ಸಂಘದ ಹೆಸರಿನಲ್ಲಿ ಸ್ವಂತ ನಿವೇಶನ ಖರೀದಿ ಮಾಡಲು ಕ್ರಮ ವಹಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್.ವಿ.ಅಶ್ವಿನ್ ಕುಮಾರ್ ತಿಳಿಸಿದರು.
ಹಲಗೂರಿನ ಬಿ.ಕೆ.ಕಾಂಪ್ಲೆಕ್ಸ್ ನಲ್ಲಿ ಶನಿವಾರ ಆಯೋಜಿಸಿದ್ದ ಹಲಗೂರು ಜನಶ್ರೇಯೋಭಿವೃದ್ದಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಎಂಟು ವರ್ಷಗಳ ಹಿಂದೆ ಆರಂಭವಾದ ಸಂಘವು ಉತ್ತಮ ಸಂಘಗಳಲ್ಲಿ ಒಂದು ಎಂದು ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗುರುತಿಸಿ ನಗದು ಬಹುಮಾನ ನೀಡಿ ಅಭಿನಂದಿಸಿದೆ. ಇಲ್ಲಿಯವರೆಗೆ ಸದಸ್ಯರಿಗೆ ₹2 ಕೋಟಿ ಸಾಲ ವಿತರಿಸಿದ್ದು, ₹8 ಕೋಟಿ ವ್ಯವಹಾರ ಆಗಿದೆ ಮಾಹಿತಿ ನೀಡಿದರು.
ಸಂಘವು ಪ್ರಸ್ತುತ ಸಾಲಿನಲ್ಲಿ ಪಿಗ್ಮಿ ಸಂಗ್ರಹಣೆಯಲ್ಲಿ ಉತ್ತಮ ಗಳಿಕೆಯಲ್ಲಿದೆ. ನಿಶ್ಚಿತ ಠೇವಣಿ ಇಡುವ ಸದಸ್ಯರಿಗೆ ಮೂರು ವರ್ಷಕ್ಕೆ ಶೇ12 ಬಡ್ಡಿ ನೀಡಲಾಗುತ್ತದೆ. ಸದಸ್ಯರು ಹೆಚ್ಚುವರಿಯಾಗಿ ಎಫ್ಡಿ ಇಡಲು ಸಹಕರಿಸಿ, ಸಂಘದ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪುಟ್ಟಲಿಂಗೇಗೌಡ, ನಿರ್ದೇಶಕರಾದ ವಿರುಪಾಕ್ಷ, ತಮ್ಮಣ್ಣೇಗೌಡ, ಎಚ್.ಆರ್.ರವಿ, ಎಚ್.ಎನ್.ಶ್ರೀಧರ್, ಎಂ.ಎನ್.ಶೋಭಾ, ಬಿ.ಕೆ.ಸುರೇಶ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗವೇಣಿ, ಸಿಬ್ಬಂದಿ ಎಂ.ಪರಮೇಶ್, ಸತೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.