ADVERTISEMENT

ಜಾನುವಾರುಗಳಿಗೆ ಮೇವು ನೀಡಿದ ಚಿತ್ರನಟ ವಿನೋದ್ ರಾಜ್‌

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 13:51 IST
Last Updated 27 ಏಪ್ರಿಲ್ 2024, 13:51 IST
ಕೆ.ಆರ್.ಪೇಟೆ ತಾಲ್ಲೂಕಿನ ಸಿಂಧಘಟ್ಟದಲ್ಲಿ ನಟ ವಿನೋದ್ ರಾಜ್ ರೈತರೊಬ್ಬರ ರಾಸುಗಳಿಗೆ ₹ 1 ಲಕ್ಷ ಮೌಲ್ಯದ ಮೇವು ನೀಡಿದರು
ಕೆ.ಆರ್.ಪೇಟೆ ತಾಲ್ಲೂಕಿನ ಸಿಂಧಘಟ್ಟದಲ್ಲಿ ನಟ ವಿನೋದ್ ರಾಜ್ ರೈತರೊಬ್ಬರ ರಾಸುಗಳಿಗೆ ₹ 1 ಲಕ್ಷ ಮೌಲ್ಯದ ಮೇವು ನೀಡಿದರು   

ಕೆ.ಆರ್.ಪೇಟೆ: ತಾಲ್ಲೂಕಿನ ಸಿಂಧಘಟ್ಟ ಗ್ರಾಮದ ರೈತ ಪುಟ್ಟರಾಜು ಅವರಿಗೆ ಸೇರಿದ ರಾಸುಗಳಿಗೆ ಮೇವಿಲ್ಲದೇ ತೊಂದರೆಯಲ್ಲಿ ಇರುವುದನ್ನು ತಿಳಿದು ನಟ ವಿನೋದ್ ರಾಜ್ ₹ 1 ಲಕ್ಷ ಮೌಲ್ಯದ ಒಂದು ಲಾರಿ ಮೇವು (ಹುಲ್ಲು) ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವಿನೋದ್‌ ರಾಜ್‌ ಅವರು ಬೇರೆ ರೈತರಿಂದ ಖರೀದಿ ಮಾಡಿ ತಂದು ಗ್ರಾಮದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ತಮ್ಮ ತಾಯಿ ಹಿರಿಯ ನಟಿ ದಿ.ಲೀಲಾವತಿ ಅವರನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.

‘ದೈವ ಸ್ವರೂಪವಾದ ಮಾತು ಬಾರದ ಜಾನುವಾರುಗಳು ಮತ್ತು ಪ್ರಾಣಿಗಳಿಗೆ ಸಹಾಯ ಮಾಡಬೇಕು ಎಂಬುದು ನನಗೆ ನನ್ನ ತಾಯಿ ಲೀಲಾವತಿ ಅವರು ಕಲಿಸಿಕೊಟ್ಟ ಪಾಠವಾಗಿದೆ. ಜಾನುವಾರುಗಳ ಸೇವೆಗೆಂದೇ ಸುಸಜ್ಜಿತವಾದ ಒಂದು ಪಶು ಆಸ್ಪತ್ರೆಯನ್ನು ನನ್ನ ತಾಯಿ ನಿರ್ಮಿಸಿದ್ದಾರೆ. ಮೇವಿಲ್ಲದೆ ಜಾನುವಾರುಗಳು ಸಂಕಷ್ಟದಲ್ಲಿರುವ ಸುದ್ದಿ ತಿಳಿದು ಜಾನುವಾರುಗಳ ಸಂರಕ್ಷಣೆ ಮಾಡಿಕೊಳ್ಳಲು ಬೇಕಾದ ಮೇವು (ಹುಲ್ಲು) ಕೊಡಿಸುವ ಮೂಲಕ ನನ್ನ ಕೈಲಾದ ಸಹಾಯ ಮಾಡಿದ್ದೇನೆ’ ಎಂದರು.

ADVERTISEMENT

ಈ ಸಂದರ್ಭದಲ್ಲಿ ಸಮಾಜ ಸೇವಕ ಪಾಂಡವಪುರ ದೀಪು (ಲೋಹಿತ್), ರೈತ ಸಂಘದ ಮುಖಂಡ ಅತ್ತಿಗಾನಹಳ್ಳಿ ಜಗದೀಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ, ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಕೆ.ಬಿ.ರಾಮು ಸೇರಿದಂತೆ ಸಿಂಧಘಟ್ಟ ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.