ಮಂಡ್ಯ: ಕರ್ನಾಟಕ ರಾಜ್ಯ ರೈತ ಸಂಘ, ಸಮಾನ ಮನಸ್ಕರ ವೇದಿಕೆ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನ.8 ರಂದು ಬೆಳಿಗ್ಗೆ 10 ಗಂಟೆಗೆ ಕೃಷಿ ಬಿಕ್ಕಟ್ಟು ಪರಿಹಾರ, ಪರ್ಯಾಯ ವಿಚಾರ ಸಂಕಿರಣ, ಕೃಷಿಯ ಉಳಿವು ಚಿಂತನ ಮಂಥನ ಕಾರ್ಯಕ್ರಮವು ಮದ್ದೂರು ತಾಲ್ಲೂಕಿನ ಸೋಮನಹಳ್ಳಯಲ್ಲಿ ನಡೆಯಲಿದೆ ಎಂದು ಒಕ್ಕೂಟದ ಮುಖಂಡ ಸಿ.ಪುಟ್ಟಸ್ವಾಮಿ ಹೇಳಿದರು.
ಸೋಮನಹಳ್ಳಿ ಎಜುಕೇಷನ್ ಸೊಸೈಟಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಚನ್ನಪಟ್ಟಣ ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಮಲ್ಲೇಶ್ ಗುರೂಜಿ ಸಾನ್ನಿಧ್ಯ ವಹಿಸುವರು. ಎಸ್ಇಎಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಟಿ.ವಿ.ರಾಜು ಉದ್ಘಾಟಿಸುವರು.
ಗೋಷ್ಠಿ–1 ರಲ್ಲಿ ಶಾಸಕ ದರ್ಶನ ಪುಟ್ಟಣ್ಣಯ್ಯ ಅವರು ನಿರುದ್ಯೋಗಿ ರೈತ ಮಕ್ಕಳಿಗೆ ಕೃಷಿಯಲ್ಲಿ ಭವಿಷ್ಯ ಇದೆಯೇ, ಸ್ವರಾಜ್ಯ ಕಲ್ಪನೆಯಿಂದ ರೈತರ ಆರ್ಥಿಕ ಸ್ವಾವಲಂಬನೆ ಸಾಧ್ಯವೇ?
ಗೋಷ್ಠಿ–2: ಕಾವೇರಿ ಜಲ ವಿವಾದ ಒಂದು ಒಳನೋಟ ಹಾಗೂ ಚಾರಿತ್ರಿಕ ಅಧ್ಯಯನ (ನಿವೃತ್ತ ಐಜಿಪಿ ಸಿ.ಚಂದ್ರಶೇಖರ್)
ಗೋಷ್ಠಿ–3: ಕೃಷಿಯಲ್ಲಿ ನೀರಿನ ಸದ್ಬಳಕೆ (ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಮೈಸೂರು ರವಿಕುಮಾರ್).
ಗೋಷ್ಠಿ–4: ರಾಸಾಯನಿಕ ಕೃಷಿ, ವಿಷ ಮಿಶ್ರಿತ ಆಹಾರ, ಆಹಾರ ಸುರಕ್ಷತೆ, ಪ್ರಭುತ್ವದ ನಡೆ ಮತ್ತು ಪರಿಹಾರಗಳು (ರೈತ ಮುಖಂಡ ಹೊನ್ನೂರು ಪ್ರಕಾಶ್),
ಗೋಷ್ಠಿ–5: ಕೃಷಿ ವಲಯದಲ್ಲಿ ಎದುರಾಗಿರುವ ಗಂಡಾಂತರಗಳು ಹಾಗೂ ರೈತ ಚಳವಳಿ ಕ್ರಮಿಸಬೇಕಾದ ದಾರಿ (ರೈತ ನಾಯಕ ಚುಕ್ಕಿ ನಂಜುಂಡಸ್ವಾಮಿ)
ಗೋಷ್ಠಿ–6: ರೇಷ್ಮೆ ಉದ್ಯಮ ಆಶಾದಾಯಕವೇ (ಕೆ.ಜಗದೀಶ್ ಕೀರಣಗೆರೆ)
ಗೋಷ್ಠಿ–7: ಹೈನುಗಾರಿಕೆಗೆ ರೈತರ ಕೊಡುಗೆ ರೈತರಿಗೆ ಆಗುತ್ತಿರುವ ವಂಚನೆ ಕುರಿತು ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ ವಿಷಯ ಮಂಡಿಸುವರು ಎಂದು ವಿವರಿಸಿದರು.
ರೈತ ನಾಯಕ ಎಂ.ಡಿ.ನಂಜುಂಡಸ್ವಾಮಿ ಅವರು ವಿಶ್ವ ವಾಣಿಜ್ಯ ಒಪ್ಪಂದದ ದುಷ್ಪರಿಣಾಮಗಳ ಕುರಿತು 90ರ ದಶಕದಲ್ಲಿ ನೀಡಿದ್ದ ಎಚ್ಚರಿಕೆ ಇಂದು ನಿಜವಾಗಿದೆ. ಕೃಷಿಯ ಮೂಲ ಸೌಕರ್ಯ ಕುಸಿದಿದೆ ರೈತರು ಬೀಜ ಗೊಬ್ಬರ ಮತ್ತು ನೀರಿನ ವಿಷಯದಲ್ಲಿ ಸರ್ಕಾರದ ಮರ್ಜಿಗೆ ಒಳಪಟ್ಟರೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಕನಸಿನ ಮಾತು. ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸು ನಿರ್ಲಕ್ಷ್ಯಗೊಂಡಿವೆ, ಈ ಎಲ್ಲಾ ಚರ್ಚೆ ಮಾಡುವುದಕ್ಕಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.