
ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಬಿದ್ದು 6 ಹುಲ್ಲಿನ ಮೆದೆಗಳು ಭಸ್ಮವಾಗಿವೆ.
ಗ್ರಾಮದ ರಮೇಶ ಒಂದು ಎಕರೆ, ಶಂಕರ, ಪುಟ್ಟಸ್ವಾಮಿ ಹಾಗೂ ಚುಂಚೇಗೌಡನ ರಮೇಶ ತಲಾ ಎರಡೂವರೆ ಎಕರೆ, ಸಣ್ಣೇಗೌಡ ಅರ್ಧ ಎಕರೆ, ಗುಜ್ಜಿ ಮಹದೇವ ಅರ್ಧ ಎಕರೆ ಜಮೀನಲ್ಲಿ ಬೆಳೆದು ಗುಡ್ಡೆ ಹಾಕಿದ್ದ ಹುಲ್ಲಿನ ಮೆದೆಗಳು ಸುಟ್ಟು ಹೋಗಿವೆ.
ಗ್ರಾಮದ ಹೊಸ ಬಡಾವಣೆ ಬಳಿ ಮರೀಗೌಡ ಎಂಬುವರ ಹೊಲದಲ್ಲಿ ಒಂದರ ಪಕ್ಕ ಒಂದರಂತೆ ಹಾಕಿದ್ದ ಹುಲ್ಲಿನ ಮೆದೆಗಳಿಗೆ ಮಧ್ಯಾಹ್ನ 1.30ರ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇವುಗಳ ಪಕ್ಕದಲ್ಲೇ ಇದ್ದ ಎರಡು ತಿಪ್ಪೆಗಳೂ ಸುಟ್ಟು ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಬರುವಷ್ಟರಲ್ಲಿ ಹುಲ್ಲಿನ ಮೆದೆಗಳು ಸಂಪೂರ್ಣ ಭಸ್ಮವಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಾಲ್ಲೂಕಿನ ಪೀಹಳ್ಳಿ ಗ್ರಾಮದಲ್ಲಿ ಕೂಡ ಶನಿವಾರ ತಡರಾತ್ರಿ ಭತ್ತದ ಹುಲ್ಲಿನ ಮೆದೆಯೊಂದು ಸುಟ್ಟು ಹೋಗಿದೆ. ಗ್ರಾಮದ ಯೋಗೇಶ್ ಅವರು ಎರಡು ಎಕರೆಯಲ್ಲಿ ಬೆಳೆದು ಗುಡ್ಡೆ ಹಾಕಿದ್ದ ಹುಲ್ಲಿನ ಮೆದೆ ಸುಟ್ಟು ಹೋಗಿದೆ. ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.