
ಶ್ರೀರಂಗಪಟ್ಟಣ: ಪರಿಶಿಷ್ಟ ಜಾತಿಯ ಒಳಮೀಸಲಾತಿ ಹಂಚಿಕೆ ಸಂಬಂಧ ನ್ಯಾಯಮೂರ್ತಿ ನಾಗಮೋನದಾಸ್ ವರದಿ ಅನುಷ್ಠಾನ ವಿರೋಧಿಸಿ ಪರಿಶಿಷ್ಟ ಬಲಗೈ ಪಂಗಡದ ಕಾರ್ಯಕರ್ತರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಕುವೆಂಪು ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು– ಮೈಸೂರು ಹೆದ್ದಾರಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾ ಸಭೆ ನಡೆಸಿದರು.
ಚಿಂತಕ ದಿಲೀಪ್ ನರಸಯ್ಯ ಮಾತನಾಡಿ, ‘ರಾಜ್ಯ ಸರ್ಕಾರ ರಾಜಕೀಯ ಲಾಭದ ದೃಷ್ಟಿಯಿಂದ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಮುಂದಾಗಿದೆ. ಇದರಿಂದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯವಾಗಲಿದೆ. ಸಾರ್ವಜನಿಕ ಚರ್ಚೆಗೆ ಅವಕಾಶವನ್ನೇ ನೀಡಿಲ್ಲ. ನಾಗಮೋಹನದಾಸ್ ವರದಿಯನ್ನು ಯಥಾವತ್ ಅನುಷ್ಠಾನ ಮಾಡುವುದು ಸಮ್ಮತವಲ್ಲ’ ಎಂದು ಹೇಳಿದರು.
ಮುಖಂಡ ಮಹದೇವಸ್ವಾಮಿ ಮಾತನಾಡಿ, ‘ಒಳ ಮೀಸಲಾತಿ ಹಂಚಿಕೆ ವಿಷಯ ಕಾನೂನುಬದ್ಧ ಆಗುವವರೆಗೆ ಜಾತಿ ಪ್ರಮಾಣ ಪತ್ರ ವಿತರಿಸಬಾರದು’ ಎಂದರು.
ತಾಲ್ಲೂಕು ಆಡಳಿತದ ಮೂಲಕ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಗಂಜಾಂ ರವಿಚಂದ್ರ, ಪಾಂಡು, ಕುಬೇರಪ್ಪ, ಮಹದೇವಸ್ವಾಮಿ, ವೆಂಕಟೇಶಮೂರ್ತಿ, ಚನ್ನನಕೆರೆ ಶಿವಕುಮಾರ್, ಕೆ.ಶೆಟ್ಟಹಳ್ಳಿ ಕುಮಾರ್, ಮುಂಡುಗದೊರೆ ಮೋಹನ್, ಹೊನ್ನಯ್ಯ, ಮಹದೇವಪುರ ಪುಟ್ಟಸ್ವಾಮಿ, ಮಹದೇವಸ್ವಾಮಿ, ಗೂಳಯ್ಯ, ಶ್ರೀಕಂಠಯ್ಯ, ಮಾದೇಶ್, ರೇವಣ್ಣ, ಶ್ವೇತಾ, ಕಲಾವತಿ, ಸುರೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.