
ಭಾರತೀನಗರ: ಸಮೀಪದ ಕೆ.ಶೆಟ್ಟಹಳ್ಳಿಯಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಕುರಿತು ದಲಿತರು ಹಾಗೂ ಇತರೆ ಸಮುದಾಯದವರ ನಡುವೆ ಸೋಮವಾರ ಏರ್ಪಟ್ಟಿದ್ದ ಮನಸ್ತಾಪವನ್ನು ತಾಲ್ಲೂಕು ಆಡಳಿತ ತಿಳಿಗೊಳಿಸಿತು.
ತಳ್ಳಾಟ ನೂಕಾಟದಲ್ಲಿ ಅಂಬೇಡ್ಕರ್ ಫ್ಲೆಕ್ಸ್ಗೆ ಹಾನಿಯಾಗಿದ್ದು, ಸ್ಥಳೀಯರು ತಹಶೀಲ್ದಾರ್ ಪರಶುರಾಮ್ ಸತ್ತಿಗೆರೆ ನೇತೃತ್ವದಲ್ಲಿ ಸಭೆ ನಡೆಸಿದ್ದರಿಂದ ಶಾಂತ ವಾತಾವರಣ ಮೂಡಿತು.
ಸೋಮವಾರ ಬೆಳಿಗ್ಗೆ ಬೊಮ್ಮಲಿಂಗೇಶ್ವರ ದೇವಾಲಯದ ಟ್ರಸ್ಟ್ ಹೆಸರಿನಲ್ಲಿರುವ ಜಾಗದಲ್ಲಿ ಸಸಿ ನೆಡುವ ಸಂದರ್ಭದಲ್ಲಿ, ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಜಾಗ ನೀಡುವಂತೆ ದಲಿತರು ಪ್ರತಿಭಟಿಸಿದಾಗ ಮಾತಿನ ಚಕಮಕಿ ನಡೆದಿತ್ತು. ಕೆ.ಎಂ. ದೊಡ್ಡಿ ಪೊಲೀಸ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಸಿಬ್ಬಂದಿಯೊಂದಿಗೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಮದ್ದೂರು ತಾಲ್ಲೂಕು ತಹಶೀಲ್ದಾರ್ ಪರಶುರಾಮ ಸತ್ತಿಗೆರೆ, ತಾಲ್ಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ನಾಗರಾಜು ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮದ ಎರಡೂ ಸಮುದಾಯಗಳ ಮುಖಂಡರ ಸಭೆ ನಡೆಸಲಾಯಿತು.
‘ಅಂಬೇಡ್ಕರ್ ಪುತ್ಥಳಿ ಸಂಬಂಧ ಹಲವು ವರ್ಷಗಳ ಹಿಂದೆಯೇ ನೀಡಿದ್ದ ಅರ್ಜಿಯನ್ನು ಕಡೆಗಣಿಸಿ, ಅನಧಿಕೃತವಾಗಿ ಬೊಮ್ಮಲಿಂಗೇಶ್ವರ ಟ್ರಸ್ಟ್ ಹೆಸರಿನಲ್ಲಿ 30 ಗುಂಟೆ ಜಾಗವನ್ನು ಅಧಿಕಾರಿಗಳು ಖಾತೆ ಮಾಡಿ ನಮ್ಮನ್ನು ವಂಚಿಸಿದ್ದಾರೆ. ಖಾತೆ ರದ್ದುಪಡಿಸಬೇಕು’ ಎಂದು ದಲಿತ ಮುಖಂಡರು ಆಗ್ರಹಿಸಿದರು. ‘ದೇವಾಲಯದ ಹೆಸರಿನಲ್ಲಿ ಕಾನೂನು ಪ್ರಕಾರವೇ ಖಾತೆ ಮಾಡಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಪಿಡಿಒ ಓದುಲಿಂಗಸ್ವಾಮಿ ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.