
ಮದ್ದೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ನಗರದ ಬಿಜೆಪಿ ಕಚೇರಿಯೆದುರು ಮದ್ದೂರು– ಮಳವಳ್ಳಿ ರಸ್ತೆ ತಡೆದು, ರಾಹುಲ್ ಗಾಂಧಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮನ್ಮುಲ್ ನಿರ್ದೇಶಕ ಎಸ್. ಪಿ ಸ್ವಾಮಿ ಮಾತನಾಡಿ, ‘ಇತ್ತೀಚೆಗೆ ದೆಹಲಿಯಲ್ಲಿ ನಡೆದ ಭಾರತ ಎಐ ಇಂಪಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬಟ್ಟೆ ಹರಿದುಕೊಂಡು ಅಶ್ಲೀಲವಾಗಿ ವರ್ತನೆ ಮಾಡಿರುವುದು ಖಂಡನೀಯ’ ಎಂದರು.
ಬಿಜೆಪಿ ಜಿಲ್ಲಾ ಯುವಮೋರ್ಚಾ ಘಟಕದ ಅಧ್ಯಕ್ಷ ಹಾಗಲಹಳ್ಳಿ ರಘು ಮಾತನಾಡಿ, ‘ರಾಹುಲ್ ಗಾಂಧಿ ಅವರು ಭಾರತದ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಎಂಬುದಕ್ಕೆ ದೆಹಲಿಯ ಶೃಂಗಸಭೆಯಲ್ಲಿ ನಡೆದ ಅವರ ಪಕ್ಷದ ಯುವ ಘಟಕದ ಕಾರ್ಯಕರ್ತರು ನಡೆದುಕೊಂಡ ರೀತಿಯೇ ಸಾಕ್ಷಿ. ಕೂಡಲೇ ರಾಹುಲ್ ಗಾಂಧಿರವರು ದೇಶದ ಜನತೆಯ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
ರಸ್ತೆ ತಡೆಯ ಪರಿಣಾಮ ಕೆಲಕಾಲ ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು. ಪ್ರತಿಭಟನೆಯ ವೇಳೆ ರಾಹುಲ್ ಗಾಂಧಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿಸಿದರು.
ಬಿಜೆಪಿ ವಕ್ತಾರೆ ಅಶ್ವಿನಿ ಶಂಕರ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಸತೀಶ್,ನಗರಾಧ್ಯಕ್ಷ ಮಧುಕುಮಾರ್, ಮುಖಂಡರಾದ ಎಂ. ಸಿ ಸಿದ್ದು, ಸತೀಶ್, ಮಲ್ಲನಕುಪ್ಪೆ ಕುಮಾರ್, ದ್ಯಾವಯ್ಯ, ಸೌಮ್ಯ, ತ್ರಿವೇಣಿ,ಅಭಿ, ಮಧು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.