
ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ನಾಲೆಗಳು, ಉಪ ನಾಲೆಗಳು ಸೇರಿದಂತೆ ರೈತರಿಗೆ ಅನುಕೂಲ ಕಲ್ಪಿಸಲು ₹600 ಕೋಟಿ ಅನುದಾನ ತರಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ತಾಲ್ಲೂಕಿನ ಕಂದೇಗಾಲ ಹಾಗೂ ತಳಗವಾದಿ ಗ್ರಾಮಗಳಲ್ಲಿ ಗುರುವಾರ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ನಾಲಾ ಜಾಲದಡಿ ಬರುವ ಹೆಬ್ಬಕವಾಡಿ ಮತ್ತು ನಿಡಘಟ್ಟ ಮುಖ್ಯ ನಾಲೆಗಳು ಹಾಗೂ ಪಿಕಪ್ ನಾಲಾ ಆಧುನೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ರೈತರ ಜಮೀನುಗಳಿಗೆ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವ ಹಿನ್ನೆಲೆಯಲ್ಲಿ ರೈತನ ಮಗನಾಗಿ ನಾಲಾ ಆಧುನೀಕರಣಕ್ಕೆ ಸರ್ಕಾರದಿಂದ ಹಂತ-ಹಂತವಾಗಿ ಸುಮಾರು ₹600 ಕೋಟಿ ಬಿಡುಗಡೆಗೊಳಿಸಲಾಗಿದೆ. ರೈತರ ಭವಿಷ್ಯ ವನ್ನು ಉತ್ತಮಗೊಳಿಸುವ ವಿಚಾರದಲ್ಲಿ ರಾಜಕೀಯ ಮಾಡದೇ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದಿಂದ ಸಾವಿರಾರು ಕೋಟಿ ರೂ.ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದ್ದರೇ ಕೆಲವೊಂದು ವರ್ಗ ನನ್ನ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ತಾಲ್ಲೂಕಿಗೆ ಬೇಕಾದ ಯೋಜನೆಗಳನ್ನು ತರಲು ತೀರ ಸೌಮ್ಯ ಸ್ವಭಾವ ಸಲ್ಲದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನನ್ನ ರಾಜಕೀಯ ಜೀವನದಲ್ಲಿ ನೇರವಾಗಿ ಮಾತನಾಡುತ್ತೇನೆ. ಪ್ರಗತಿಯ ಮೂಲಕ ಮತದಾರರ ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ ಹೊರತು ಬೇರೆಯವರ ರೀತಿಯಲ್ಲಿ ಕಾಲಹರಣ ಮಾಡುವುದಿಲ್ಲ ಎಂದು ಸ್ವಷ್ಟಪಡಿಸಿದರು.
ನಾಲಾ ಆಧುನೀಕರಣಕ್ಕೆ ಖರ್ಚು ಮಾಡುತ್ತಿರುವ ಹಣವನ್ನು ರೈತರು ಒಂದೆರಡು ಬೆಳೆಯಲ್ಲಿ ಸಂಪಾದನೆ ಮಾಡಲಿದ್ದಾರೆ. ಸಂಪೂರ್ಣವಾಗಿ ನಾಲೆಗಳು ಅಭಿವೃದ್ಧಿಗೊಂಡರೇ ಕೆಆರ್ಎಸ್ ಜಲಾಶಯದಿಂದ 24 ಗಂಟೆಯಲ್ಲಿಯೇ ನೀರು ರೈತರ ಹೊಲ ಗದ್ದೆಗಳಿಗೆ ಸೇರಲಿದೆ. ಹೆಚ್ಚುವರಿ ಕೆಲಸವಿದ್ದರೂ ಕೂಡ ಅವುಗಳನ್ನು ಸೇರಿಸಿಕೊಂಡು ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಹೇಳಲಾಗಿದೆ. ನಾಲಾ ಆಧುನೀಕರಣ ವಿಚಾರದಲ್ಲಿ ಗೊಂದಲ ಸೃಷ್ಠಿಸುವವರಿಗೆ ರೈತರೇ ತಕ್ಕ ಉತ್ತರ ನೀಡಬೇಕು ಎಂದು ಸಲಹೆ ನೀಡಿದರು.
ತಳಗವಾದಿ ಗ್ರಾಮದಿಂದ ಮಳವಳ್ಳಿ ಕೆರೆಗೆ ಹೆಬ್ಬಕವಾಡಿ ಶಾಲಾ ನಾಲೆಯಿಂದ ನೀರು ಪೂರೈಸುವ ನಾಲೆ ಹಾಗೂ ಪಿಕಪ್ ನಾಲಾ ಆಧುನೀಕರಣ ಮತ್ತು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ವೆಂಕಟರಮಣೇಗೌಡ(ಸ್ಟಾರ್ ಚಂದ್ರು), ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಗ್ರಾ.ಪಂ. ಅಧ್ಯಕ್ಷರಾದ ಸುಮಿತ್ರಾ ಎನ್.ಶಿವಕುಮಾರ್, ಮರಿಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ನಿರ್ದೇಶಕರಾದ ಕೆ.ಜೆ.ದೇವರಾಜು, ದಿಲೀಪ್ ಕುಮಾರ್(ವಿಶ್ವ), ಸತೀಶ್, ಮನು, ಮುಖಂಡರಾದ ಕುಳ್ಳಚನ್ನಂಕಯ್ಯ, ಕೆ.ಸಿ.ಚೌಡೇಗೌಡ, ಚನ್ನಿಗರಾಯ, ಶ್ರೀನಿವಾಸ್, ರವಿ, ಶಿವಲಿಂಗ, ಟಿ.ಪಿ.ಚಂದ್ರಶೇಖರ್, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ಕೃಷ್ಣ ಬಾಬುದೇವ್, ಭರತೇಶ್ ಕುಮಾರ್ ಪಾಲ್ಗೊಂಡಿದ್ದರು.
ದೇವಸ್ಥಾನ ಜೀರ್ಣೋದ್ಧಾರಕ್ಕೆ ಶೀಘ್ರ ಅನುಮೋದನೆ
ತಾಲ್ಲೂಕಿನ ಕಂದೇಗಾಲ ಬಳಿಯ ಐತಿಹಾಸಿಕ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಲು ಇನ್ನೂ ಕೆಲವೇ ದಿನಗಳಲ್ಲಿ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಲಾಗುವುದು. ಅಲ್ಲದೇ ಇತರ ಪುಣ್ಯ ಕ್ಷೇತ್ರಗಳಿಗೂ ಹೊಸ ಕಾಯಕಲ್ಪ ನೀಡಲಾಗುವುದು. ವಿದ್ಯುತ್ ಕುಡಿಯುವ ನೀರು ರಸ್ತೆಯ ಅಭಿವೃದ್ಧಿಯ ಜೊತೆಗೆ ರೈತರ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವ ಆಶಯದೊಂದಿಗೆ ₹40 ಕೋಟಿ ವೆಚ್ಚದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ತಂತ್ರಜ್ಞಾನ ಆಧಾರಿಕ ಶಿಕ್ಷಣ ನೀಡಲಾಗುತ್ತಿದೆ. ಬಜೆಟ್ ನಂತರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.