ಶ್ರೀರಂಗಪಟ್ಟಣ: ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಬುಧವಾರ ಪಟ್ಟಣದ ಬಳಿ ಕಾವೇರಿ ನದಿಗೆ ಬಿದ್ದಿದ್ದ ವೃದ್ಧೆಯನ್ನು ಸ್ಥಳೀಯರು ರಕ್ಷಿಸಿದರು.
ಚಾಮರಾಜನಗರ ತಾಲ್ಲೂಕು ಬೆಂಡರವಾಡಿ ಗ್ರಾಮದ ದಿವಂಗತ ಮರಯ್ಯ ಅವರ ಪತ್ನಿ ಗುಂಡಮ್ಮ (70) ಅವರು ಪಟ್ಟಣದ ವೆಲ್ಲೆಸ್ಲಿ ಸೇತುವೆ ಸಮೀಪ ನದಿಗೆ ಹಾರಿದ್ದರು.
ಅದನ್ನು ಗಮನಿಸಿದ ಸ್ಥಳೀಯ ರೈತರು ತಕ್ಷಣ ಧಾವಿಸಿ ಗುಂಡಮ್ಮ ಅವರನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪಟ್ಟಣ ಪೊಲೀಸ್ ಠಾಣೆಯ ಎಎಸ್ಐ ಶಿವರಾಮು ಮತ್ತು ತಂಡ ಗುಂಡಮ್ಮ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿತು.
ಕೌಟುಂಬಿಕ ಕಲಹದಿಂದ ಬೇಸತ್ತು ಗುಂಡಮ್ಮ ಮಂಗಳವಾರ ಸ್ವಗ್ರಾಮ ಬೆಂಡರವಾಡಿಯಿಂದ ಮನೆ ಬಿಟ್ಟು ಬಂದಿದ್ದರು. ಮಂಡ್ಯದಲ್ಲಿ ತಂಗಿದ್ದ ಅವರು ಬುಧವಾರ ಬೆಳಿಗ್ಗೆ ಪಟ್ಟಣಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕಾವೇರಿ ನದಿಗೆ ಹಾರಿದ್ದರು.
‘ಅವರ ಮೊಮ್ಮಗನನ್ನು ಠಾಣೆಗೆ ಕರೆಸಿ ಗುಂಡಮ್ಮ ಅವರನ್ನು ಅವರ ಊರಿಗೆ ಕಳುಹಿಸಿಕೊಡಲಾಗಿದೆ’ ಎಂದು ಎಎಸ್ಐ ಶಿವರಾಮು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.