ADVERTISEMENT

ಮದ್ದೂರು ಘಟನೆ | ಪೂರ್ವಯೋಜಿತ ಕೃತ್ಯದ ಶಂಕೆ: ಸಚಿವ ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 15:45 IST
Last Updated 8 ಸೆಪ್ಟೆಂಬರ್ 2025, 15:45 IST
   

ಮದ್ದೂರು (ಮಂಡ್ಯ ಜಿಲ್ಲೆ): ‘ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 21 ಆರೋಪಿಗಳನ್ನು ಬಂಧಿಸಲಾಗಿದೆ. ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಯಾರನ್ನೂ ಓಲೈಸುವುದಿಲ್ಲ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.  

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತನಿಖೆಯನ್ನು ಉನ್ನತ ಮಟ್ಟದಲ್ಲಿ ಎಲ್ಲ ರೀತಿಯಲ್ಲೂ ಪೊಲೀಸ್ ಇಲಾಖೆಯಿಂದ ವಿಚಾರಣೆ ನಡೆಸಲು ಐ.ಜಿ ಹಾಗೂ 8 ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಂಪೂರ್ಣ ವರದಿ ಸಿದ್ಧಪಡಿಸಿ ಶೀಘ್ರದಲ್ಲೇ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು’ ಎಂದರು.

‘ಇದು ಗಂಭೀರವಾದ ವಿಷಯ. ಮೆರವಣಿಗೆ ವೇಳೆ ಲೈಟ್‌ ಆಫ್‌ ಮಾಡಿರುವ ಮಾಹಿತಿ ಇದೆ. ಇದು ‘ಪೂರ್ವಯೋಜಿತ ಕೃತ್ಯ’ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಲ್ಲವೂ ಕೂಡ ಗೊತ್ತಾಗಬೇಕು. ಬಂಧಿತರಲ್ಲಿ ಇಬ್ಬರು ಹೊರ ಜಿಲ್ಲೆಯವರು ಅಂತ ತಿಳಿದುಬಂದಿದೆ. ನಾವು ಒಂದು ಸಮುದಾಯದ ಪರ ನಿಲ್ಲುವ ಪ್ರಶ್ನೆಯೇ ಇಲ್ಲ. ಮಂಡ್ಯ ಜನತೆಯ ಪರ ನಿಲ್ಲುತ್ತೇವೆ’ ಎಂದರು. 

ADVERTISEMENT

ಪ್ರತಾಪ ಸಿಂಹರಂಥ ಕಿಡಿಗೇಡಿಗಳು ಕಾರಣ: ಆರೋಪ

ಇಂತಹ ಘಟನೆ ಆಗೋಕೆ ಪ್ರತಾಪ ಸಿಂಹ ಅವರಂಥ ಕಿಡಿಗೇಡಿಗಳು ಕಾರಣ. ಬಿಜೆಪಿ ಪಕ್ಷ ಅವರನ್ನು ದೂರ ಇಟ್ಟಿದೆ. ಅದಕ್ಕಾಗಿ ಏನೇನೋ ಪ್ರಚೋದನೆ ಮಾಡ್ತಾರೆ. ನಾನು ತುಂಬಾ ರಾಜಕೀಯ ನೋಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.  

ಕುಮಾರಸ್ವಾಮಿ ಅವರು ‘ಕಾಂಗ್ರೆಸ್ ಅವನತಿ ಶುರು ಅಂತಾರೆ. ಮೊದಲು ಜೆಡಿಎಸ್ ಅವನತಿ ಆಗುವುದನ್ನು ನಿಲ್ಲಿಸಲಿ. ಇದಕ್ಕೆ ರಾಜಕೀಯ ಬೆರೆಸಬೇಡಿ. ರಾಜಕಾರಣ ಹೋರಾಟ ಬೇರೆ ಕಡೆ ಮಾಡೋಣ. ಧರ್ಮದ ಹೆಸರಿನಲ್ಲಿ ನಮ್ಮ ಸರ್ಕಾರ ರಾಜಕೀಯ ಮಾಡುವುದಿಲ್ಲ. ಧಾರ್ಮಿಕ ಸಂಘಟನೆಗಳು ಯಾವುದೇ ರಾಜಕೀಯ ಪ್ರಚೋದನೆಗೆ ಒಳಗಾಗಬಾರದು’ ಎಂದು ಮನವಿ ಮಾಡಿದರು. 

ಈ ವೇಳೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಕುಮಾರ, ಜಿ.ಪಂ ಸಿಇಒ ನಂದಿನಿ, ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.