ಮಂಡ್ಯ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ‘ಸಲಾಂ ಆರತಿ’ ಆಚರಣೆಯನ್ನು ಕೈಬಿಡಬೇಕು ಎಂದು ದೇವಾಲಯದ ಸ್ಥಾನೀಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾತ್ರಿ ಮಹಾಮಂಗಳಾರತಿ ಸಂದರ್ಭದಲ್ಲಿ ದೇವಾಲಯದ ರಾಜಗೋಪುರದ ಮುಂಭಾಗ ಎರಡು ದೀವಟಿಗೆ ( ಪಂಜು) ಹಿಡಿದು ಆರತಿ ಮಾಡಲಾಗುತ್ತಿದೆ. ಪಂಜು ಹಿಡಿದ ಇಬ್ಬರು ಎದುರುಬದುರು ನಿಲ್ಲುತ್ತಾರೆ, ನಡು ಬಗ್ಗಿಸಿ ಮೂರು ಬಾರಿ ಸಮಸ್ಕಾರ ಮಾಡುತ್ತಾರೆ. ಇದು ಮುಸ್ಲಿಮರು ಭೇಟಿಯಾದಾಗ ಪರಸ್ಪರ ಸಲಾಂ ಮಾಡುವ ಸಂಕೇತವಾಗಿದ್ದು ‘ಸಲಾಂ’ ಆರತಿ ಎಂದೇ ಹೆಸರು ಬಂದಿದೆ.
ಸಾವಿರಾರು ವರ್ಷಗಳಿಂದ ದೇವಾಲಯದಲ್ಲಿ ಸಂಜೆ ಸಂದ್ಯಾರತಿ ಆಚರಣೆ ಇತ್ತು. ಟಿಪ್ಪು ಆಳ್ವಿಕೆ ಕಾಲದಲ್ಲಿ ಸಂದ್ಯಾರತಿ ಜೊತೆಗೆ ಸಲಾಂ ಆರತಿ ಪದ್ಧತಿ ಜಾರಿಗೊಳಿಸಲಾಗಿದೆ. ಸಲಾಂ ಆರತಿ ಆಚರಣೆ ಸ್ಥಗಿತಗೊಳಿಸಿ ಸಂದ್ಯಾರತಿ ಆಚರಣೆ ಮುಂದುವರಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿ ಸ್ಥಾನೀಕರು ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ಚೆಲುವನಾರಾಯಣಸ್ವಾಮಿಗೆ ತ್ರಿಕಾಲ ಆರತಿ ನೆರವೇರುತ್ತದೆ. ದೇವರ ಮೂರ್ತಿಗೆ ಮಹಾಮಂಗಳಾರತಿ ನೆರವೇರುವ ವೇಳೆ ದೇವಾಲಯದ ಹೊರಗಿನ ರಾಜಗೋಪುರದ ಬಳಿ ಸಲಾಂ ಆರತಿ ನಡೆಯುತ್ತದೆ. ಮಹಾಮಂಗಳಾರತಿ, ಸಂದ್ಯಾರತಿಯನ್ನು ಉಳಿಸಿಕೊಂಡು ಸಲಾಂ ಆರತಿಯನ್ನು ಕೈಬಿಡಬೇಕು’ ಎಂದು ಸ್ಥಾನೀಕರಾದ ಶ್ರೀನಿವಾಸ ಗುರೂಜಿ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.