ADVERTISEMENT

ತೆಂಗಿಗೆ ರೋಗಬಾಧೆ | ಸಮೀಕ್ಷೆ ಅಪೂರ್ಣ: ಪರಿಹಾರ ಸಿಗದೇ ರೈತರು ಕಂಗಾಲು

ತುರ್ತು ನಿಯಂತ್ರಣ ಕ್ರಮ ಕೈಗೊಳ್ಳದ ಇಲಾಖೆ: ರೈತರ ಆರೋಪ

ಸಿದ್ದು ಆರ್.ಜಿ.ಹಳ್ಳಿ
Published 21 ಅಕ್ಟೋಬರ್ 2025, 23:30 IST
Last Updated 21 ಅಕ್ಟೋಬರ್ 2025, 23:30 IST
ಕಪ್ಪುತಲೆ ಹುಳುವಿನ ಬಾಧಿತ ತೋಟ
ಕಪ್ಪುತಲೆ ಹುಳುವಿನ ಬಾಧಿತ ತೋಟ   

ಮಂಡ್ಯ: ಕಪ್ಪುತಲೆ ಹುಳು ಮತ್ತು ಬಿಳಿನೊಣ ಬಾಧೆಗೆ ತುತ್ತಾಗಿರುವ ತೆಂಗಿನ ಬೆಳೆಯ ಸಮೀಕ್ಷೆ ರಾಜ್ಯದಲ್ಲಿ ಅಪೂರ್ಣಗೊಂಡಿದ್ದು, ತೋಟಗಾರಿಕಾ ಇಲಾಖೆಯಿಂದ ಪರಿಹಾರ ಸಿಗದ ಕಾರಣ ರೈತರು ಕಂಗಾಲಾಗಿದ್ದಾರೆ.

ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು, ರೋಗ ಬಾಧಿತ ಪ್ರದೇಶಗಳಲ್ಲಿ ‘ಪೆಸ್ಟ್‌ ಸರ್ವೆಯರ್‌’ (ಪಿ.ಎಸ್‌) ಮೂಲಕ ವೈಜ್ಞಾನಿಕ ಸಮೀಕ್ಷೆ ನಡೆಸಿ ಒಂದು ತಿಂಗಳೊಳಗೆ (ಸೆ.5ರೊಳಗೆ) ನಿಖರ ಮಾಹಿತಿಯನ್ನು ಸಲ್ಲಿಸುವಂತೆ ಇಲಾಖೆ ಸೂಚಿಸಿತ್ತು. 

ತೆಂಗು ಬೆಳೆಯುವ ಪ್ರಮುಖ 15 ಜಿಲ್ಲೆಗಳಲ್ಲಿ ಒಟ್ಟು 18.65 ಲಕ್ಷ ತಾಕುಗಳಿದ್ದು, ಇವುಗಳಲ್ಲಿ ಇದುವರೆಗೆ 5.93 ಲಕ್ಷ ತಾಕುಗಳ (ಶೇ 32) ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ. ಇದರಿಂದ ಇಲಾಖೆಗೆ ರೋಗ ಬಾಧಿತ ಪ್ರದೇಶದ ನಿಖರ ಮತ್ತು ಸಮಗ್ರ ಅಂಕಿಅಂಶವೇ ದೊರೆತಿಲ್ಲ ಎನ್ನಲಾಗಿದೆ. 

ADVERTISEMENT

ಕಾರಣಗಳೇನು?:

‘ಒಂದು ತಿಂಗಳ ಅವಧಿಯಲ್ಲಿ 18 ಲಕ್ಷ ತಾಕುಗಳನ್ನು ಸಮೀಕ್ಷೆ ಮಾಡುವುದು ಅಸಾಧ್ಯ. ಜತೆಗೆ ತೋಟಗಾರಿಕೆ ಇಲಾಖೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲ ಮತ್ತು ಸಮೀಕ್ಷೆಗೆ ಅಗತ್ಯವಿದ್ದಷ್ಟು ಪಿ.ಎಸ್‌.ಗಳನ್ನು ನಿಯೋಜಿಸಿರಲಿಲ್ಲ. ಕೆಲವು ಕಡೆ ನೆಟ್‌ವರ್ಕ್‌ ಸಮಸ್ಯೆಯಿಂದ ‘ಕ್ರಾಪ್‌ ಇನ್‌ಸ್ಪೆಕ್ಷನ್‌ ಬಿಎಚ್‌ಸಿ ಆ್ಯಪ್‌’ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದ ಸಮೀಕ್ಷೆ ಕಾರ್ಯ ಅಪೂರ್ಣಗೊಂಡಿದೆ’ ಎಂದು ಪೆಸ್ಟ್‌ ಸರ್ವೆಯರ್‌ಗಳು ತಿಳಿಸಿದ್ದಾರೆ.

7 ಲಕ್ಷ ಹೆಕ್ಟೇರ್‌ ವಿಸ್ತೀರ್ಣ:

ರಾಜ್ಯದಲ್ಲಿ ತೆಂಗು ಪ್ರಮುಖ ತೋಟಗಾರಿಕೆ ಬೆಳೆಯಾಗಿದ್ದು, ಸುಮಾರು 7.04 ಲಕ್ಷ ಹೆಕ್ಟೇರ್‌ ವಿಸ್ತೀರ್ಣ ಹೊಂದಿದೆ. 34.79 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯಿದೆ. ತುಮಕೂರು, ಹಾಸನ, ಮಂಡ್ಯ, ಉತ್ತರಕನ್ನಡ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ ಹಾಗೂ ರಾಮನಗರ ಈ 15 ಜಿಲ್ಲೆಗಳಲ್ಲಿ ತೆಂಗನ್ನು ಅತ್ಯಧಿಕವಾಗಿ ಬೆಳೆಯಲಾಗುತ್ತಿದೆ. 

‘ಅಪೂರ್ಣ ಸಮೀಕ್ಷೆಯಿಂದ ರೈತರಿಗೆ ನ್ಯಾಯ ಸಿಗುವುದಿಲ್ಲ. ಬರ, ಅತಿವೃಷ್ಟಿ, ರೋಗಬಾಧೆ ಸಮಸ್ಯೆಗಳಿಂದ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ರೋಗ ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಮತ್ತು ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು’ ಎಂದು ಮಂಡ್ಯ ರೈತ ಮುಖಂಡ ಕೆ.ಬೋರಯ್ಯ ಒತ್ತಾಯಿಸಿದ್ದಾರೆ. 

ರೋಗಬಾಧೆಯಿಂದ ತೆಂಗು ಇಳುವರಿ ಕಡಿಮೆಯಾಗಿದೆ. ರೋಗ ನಿಯಂತ್ರಿಸಲು ತೋಟಗಾರಿಕೆ ಇಲಾಖೆಯಿಂದ ನಿಯಂತ್ರಣ ಕ್ರಮವೂ ಇಲ್ಲ ಪರಿಹಾರವೂ ಸಿಕ್ಕಿಲ್ಲ
– ಎಂ.ಎನ್‌.ಮಹೇಶ್‌ಕುಮಾರ್‌ ಸಾವಯವ ಕೃಷಿಕ ಮಳವಳ್ಳಿ
ರೋಗ ನಿಯಂತ್ರಿಸಲು ರೈತರಿಗೆ ಸಲಹೆ ನೀಡಲಾಗುತ್ತಿದೆ. ಸಮೀಕ್ಷೆ ವರದಿ ಆಧರಿಸಿ ರೈತರಿಗೆ ನೆರವು ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ
– ಆರ್‌. ಗಿರೀಶ್‌ ತೋಟಗಾರಿಕೆ ನಿರ್ದೇಶಕ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.