
ಮಂಡ್ಯ: ‘ಹೆಚ್ಚು ಮತಗಳನ್ನು ನೀಡಿರುವ ಗ್ರಾಮಗಳಿಗಷ್ಟೇ ಅಭಿವೃದ್ಧಿ ಕೆಲಸ ಎನ್ನುವ ಧೋರಣೆ ಕಾಂಗ್ರೆಸ್ ಶಾಸಕರಲ್ಲಿದೆ. ಆದರೆ, ನಾವು ಶಾಸಕರಾಗಿದ್ದಾಗ ಎಲ್ಲರನ್ನೂ ಸರಿಸಮನಾಗಿ ನೋಡುತ್ತಿದ್ದೆವು’ ಎಂದು ನಾಗಮಂಗಲದ ಮಾಜಿ ಶಾಸಕ ಕೆ.ಸುರೇಶ್ಗೌಡ ಹೇಳಿದರು.
ತಾಲ್ಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಬಿ.ಆರ್. ರಾಮಚಂದ್ರ ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಸರ್ಕಾರದ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರ್ಕಾರಿ ಆಸ್ತಿಗಳನ್ನು ಕಾಪಾಡಿಕೊಳ್ಳಲು ವಿಫಲರಾಗಿದ್ದಾರೆ. ಸಂಸದರು ತರುವ ಅನುದಾನದಲ್ಲಿ ಭೂಮಿಪೂಜೆ ನೆರವೇರಿಸುತ್ತಿದ್ದಾರೆ. ಕೇಂದ್ರದಲ್ಲಿ ಸಚಿವರಾಗಿಯೂ ಎಚ್.ಡಿ. ಕುಮಾರಸ್ವಾಮಿ ಅವರು ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ. ಅದೇ ರೀತಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಮಾಡಲು ಮಾತ್ರ ಸ್ಥಳ ಗುರುತಿಸಿಕೊಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ’ ಎಂದು ಆರೋಪಿಸಿದರು.
‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಷುಗರ್ ಕಾರ್ಖಾನೆಗೆ ಅನುದಾನ ಬಿಡುಗಡೆ ಮಾಡಿದ್ದು, ಈಗ ಎಲ್ಲಿ ಹೋಯಿತು? ಕುಮಾರಸ್ವಾಮಿ ಅವರಿಗೆ ನಾಗಮಂಗಲದಲ್ಲಿ ಲೀಡ್ ಕೊಟ್ಟು ಗೆಲ್ಲಿಸಿಕೊಂಡೆವು. ಆಗಲೇ ಇವರೆಲ್ಲ ರಾಜೀನಾಮೆ ನೀಡಬೇಕಾಗಿತ್ತು. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಮತಗಳನ್ನೆಲ್ಲಾ ಸೂಪರ್ಸೀಡ್ ಮಾಡಿಸಿ ತನ್ನ ಮಗನನ್ನು ಅಧ್ಯಕ್ಷ ಮಾಡಿದ ಎನ್. ಚಲುವರಾಯಸ್ವಾಮಿ ಅವರು ಎರಡನೇ ರಾಹುಲ್ಗಾಂಧಿ ಥರ ದಡ್ಡರಂತೆ ನಡೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.
ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ಮತ್ತೆ ತರುತ್ತೇವೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗೋಣ. ಯಾವುದೇ ಕಿತ್ತಾಟಗಳಿಗೆ ಅವಕಾಶ ಮಾಡಿಕೊಡದೆ 2028ರ ವೇಳೆಗೆ ರಾಜ್ಯದಲ್ಲಿ ಹೊಸ ಅಲೆ ಹೇಳುತ್ತದೆ. ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿ ಎಂದು ಮನವಿ ಮಾಡಿದರು.
ಮನ್ಮುಲ್ ನಿರ್ದೇಶಕ ಬಿ.ಆರ್. ರಾಮಚಂದ್ರ, ಮುಖಂಡರಾದ ತಿಮ್ಮೇಗೌಡ, ಸಿದ್ದಪ್ಪ, ಶಶಿ, ರಾಜಣ್ಣ, ಗುಣಶೇಖರ್, ಸೋಮಣ್ಣ, ಲಿಂಗರಾಜು, ಪುಟ್ಟಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.