ADVERTISEMENT

ಇಂಡಿಯಾ ಒಕ್ಕೂಟದಲ್ಲಿನ ವ್ಯತ್ಯಾಸಕ್ಕೆ ಬಿಜೆಪಿಗೆ ಲಾಭ: ಸಚಿವ ಎನ್.ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 13:42 IST
Last Updated 10 ಫೆಬ್ರುವರಿ 2025, 13:42 IST
ನಾಗಮಂಗಲ ತಾಲ್ಲೂಕಿನ ಕೆಲಗೆರೆಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು
ನಾಗಮಂಗಲ ತಾಲ್ಲೂಕಿನ ಕೆಲಗೆರೆಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು   

ನಾಗಮಂಗಲ: ದೆಹಲಿ ಮತ್ತು ಹರಿಯಾಣ ಚುನಾವಣೆಗಳಲ್ಲಿ ಇಂಡಿಯಾ ಒಕ್ಕೂಟ ಜೊತೆಯಾಗಿ ಚುನಾವಣೆ ಎದುರಿಸಿದ್ದರೆ ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ದೆಹಲಿಯಲ್ಲಿ ಎಎಪಿಗೆ ಗೆಲುವು ಸಿಗುತ್ತಿತ್ತು. ಆದರೆ ಇಂಡಿಯಾ ಒಕ್ಕೂಟದಲ್ಲಿ ಆದ ಕೆಲ ವ್ಯತ್ಯಾಸದಿಂದ ಬಿಜೆಪಿಗೆ ಲಾಭವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲ್ಲೂಕಿನ ಕೆಲಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಿಜೆಪಿ ಪಕ್ಷವು ಮೋದಿ ಅವರ ವರ್ಚಸ್ಸಿನಿಂದಲೋ, ಸ್ಥಳೀಯ ನಾಯಕರ ವರ್ಚಸ್ಸಿನಿಂದಲೋ ಅಧಿಕಾರಕ್ಕೆ ಬಂದಿಲ್ಲ. ಇಂಡಿಯಾ ಒಕ್ಕೂಟದಲ್ಲಿ ಉಂಟಾದ ವ್ಯತ್ಯಾಸದಿಂದ ಲಾಭ ಪಡೆದು ಅಧಿಕಾರಕ್ಕೆ ಬಂದಿದ್ದಾರೆ ಎಂದರು.

ಅಧಿಕಾರ ಸಿಕ್ಕಿದ ಮೇಲೆ ಅವರು ಮಾತನಾಡುವುದು ಸಹಜ. ಆದರೆ ವಾಸ್ತವ ಅವರು ಹೇಳುವಂತೆ ಇಲ್ಲ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವು ಸೋತಿರುವುದು ಭದ್ರ ತಳಹದಿ ಇಲ್ಲದಿರುವುದನ್ನು ಮತ್ತು ಜನಾಭಿಪ್ರಾಯವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಬಿಜೆಪಿ ನಮ್ಮ ಸಾಮರ್ಥ್ಯದಿಂದ ಗೆದ್ದಿದ್ದೇವೆ ಎಂದು ಹೇಳುವುದು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.

ADVERTISEMENT

ರಸ್ತೆ ಅಭಿವೃದ್ಧಿಯ ವಿಚಾರವಾಗಿ ಎಂಜಿನಿಯರ್‌ಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವ ಜೊತೆಗೆ ಜನರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಿ ಎಂದು ಸೂಚನೆ ನೀಡಿದರು.

ಕೆಲ ಗ್ರಾಮಸ್ಥರು ವಿವಿಧ ಸಮಸ್ಯೆ ಈಡೇರಿಕೆಗೆ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡರಾದ ಸುನೀಲ್ ಲಕ್ಷ್ಮೀಕಾಂತ್, ಪ್ರಸನ್ನ, ದೇವರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.