ADVERTISEMENT

ಡಿ.ಕೆ.ಶಿವಕುಮಾರ್‌ ಬಿಜೆಪಿಗೆ ಬಂದ್ರೆ ತಡೆಯೋಕೆ ನಾವ್ಯಾರು?‌: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 14:33 IST
Last Updated 1 ಆಗಸ್ಟ್ 2025, 14:33 IST
   

ಮಂಡ್ಯ: ‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿಗೆ ಬರುವುದು ಅನುಮಾನ. ಬಂದ್ರೆ ತಡೆಯೋಕೆ ನಾವ್ಯಾರು? ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು’ ಎಂದು ಮಾಜಿ ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

‘ಡಿ.ಕೆ.ಶಿವಕುಮಾರ್‌ ಪಕ್ಷಕ್ಕೆ ಬರುವುದು ಬೇಡ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅಶ್ವತ್ಥನಾರಾಯಣ ಅವರು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವುದು ಚರ್ಚೆಗೆ ಗ್ರಾಸವಾಗಿದೆ. 

‘ಈಗ ಶಿವಕುಮಾರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಅವರಿಗೇಕೆ ನಾವು ಅಗೌರವ ಸೂಚಿಸಬೇಕು. ಅವರಿಗೆ ಮಸಿ ಬಳಿಯುವಂಥ ಕೆಲಸ ನಾವೇಕೆ ಮಾಡಬೇಕು. ಅವರಲ್ಲಿ ಗುದ್ದಾಟ ನಡೀತಿದೆ. ಸರ್ಕಾರ ಯಾವ ಮಟ್ಟಕ್ಕೆ ಹೋಗುತ್ತದೆಂದು ಕಾದು ನೋಡುತ್ತೇವೆ. ಅವರವರೇ ಆ ಸರ್ಕಾರಕ್ಕೆ ದಾರಿ ತೋರಿಸುತ್ತಾರೆ’ ಎಂದು ವ್ಯಂಗ್ಯ ನುಡಿದರು. 

ADVERTISEMENT

ವ್ಯವಸ್ಥಿತ ಅನಿಸುತ್ತಿದೆ:

ಧರ್ಮಸ್ಥಳದಲ್ಲಿ ಮೂಳೆ ಸಿಕ್ಕ ವಿಚಾರವಾಗಿ ಪ್ರತಿಕ್ರಿಯಿಸಿ, ‘ಪವಿತ್ರ ಸ್ಥಳದ ಮೇಲೆ ಇರುವ ಅಪನಂಬಿಕೆ ದೂರವಾಗಬೇಕು. ಪಿಎಫ್‌ಐ, ಎಸ್‌ಎಫ್‌ಐನಂತಹ ಸಂಘಟನೆಗಳು ನಮ್ಮ ಶ್ರದ್ಧಾಕೇಂದ್ರಗಳ ಬಗ್ಗೆ ಮಾತನಾಡುವಂತಾಗಿದೆ. ಇದಕ್ಕೆ ಪೂರಕವಾಗಿ ಕುಮ್ಮಕ್ಕು ಕೊಡುವವರು ಇದ್ದಾರೆ. ಅಗ್ನಿ ಪರೀಕ್ಷೆ ಎದುರಿಸಲು ಅವರು ಸಿದ್ದರಿದ್ದಾರೆ. ಬೇಗ ತನಿಖೆ ನಡೆದು ಸತ್ಯ ಹೊರಬರಲಿ’ ಎಂದರು.

ಯೂಟ್ಯೂಬರ್‌ಗಳು ಮಾಡುತ್ತಿರುವ ವಿಡಿಯೊ ನೋಡಿದರೆ ಎಲ್ಲವೂ ವ್ಯವಸ್ಥಿತ ಅನ್ನಿಸುತ್ತದೆ. ಆರೋಪ ಮಾಡುತ್ತಿರುವವರನ್ನು ಕೂಡ ಸರ್ಕಾರ ತನಿಖೆಗೆ ಒಳಪಡಿಸಬೇಕು. ಅವರಿಗೆ ಹಣ ಎಲ್ಲಿಂದ ಬರುತ್ತದೆ? ಹಿಂದೆ ಯಾರಿದ್ದಾರೆ ಅನ್ನುವ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.