
ಪಾಂಡವಪುರ: ರೈತರು ಉತ್ತಮ ಗುಣಮಟ್ಟದ ತೆಂಗು ಬೇಸಾಯದ ಜೊತೆಗೆ ಅಂತರ ಬೆಳೆಗಳ ಸಮಗ್ರ ಬೇಸಾಯ ಮಾಡಿ ಆರ್ಥಿಕ ಸುಧಾರಣೆ ಮಾಡಿಕೊಳ್ಳಬೇಕು ಎಂದು ತೋಟಗಾರಿಕೆ ಜಂಟಿ ನಿರ್ದೇಶಕಿ ಕೆ.ಎನ್.ರೂಪಶ್ರೀ ಹೇಳಿದರು.
ಪಟ್ಟಣದ ತೋಟಗಾರಿಕೆ ಇಲಾಖೆ ಆವರಣದಲ್ಲಿ ತೋಟಗಾರಿಕೆ ಇಲಾಖೆ, ಪಾಂಡವಪುರ ಕೃಷಿಕ ಸಮಾಜ ಹಾಗೂ ಮೈಸೂರು ತೋಟಗಾರಿಕೆ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಈಚೆಗೆ ನಡೆದ ‘ತೆಂಗು ಬೆಳೆ ಸಮಗ್ರ ಬೇಸಾಯ, ಕೀಟ ಹಾಗೂ ರೋಗ ನಿಯಂತ್ರಣ’ ಕುರಿತ ವಿಚಾರ ಸಂಕಿರಣ ಉದ್ಫಾಟಿಸಿ ಅವರು ಮಾತನಾಡಿದರು.
ತೆಂಗು ವಾಣಿಜ್ಯ ಬೆಳೆಯಾಗಿದ್ದು, ತೆಂಗಿಗೆ ತಗಲುವ ರೋಗಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ತೆಂಗಿನ ಸಸಿ ಹಾಗೂ ಮರಗಳಿಗೆ ತಗಲುವ ಕೀಟಗಳಾದ ದುಂಬಿ, ಕೆಂಪು ಮೂತಿ ಹುಳು, ಕಪ್ಪು ತಲೆ ಕಂಬಳಿ ಹುಳು, ಬಿಳಿ ನೋಣಗಳ ಹಾವಳಿ ಮತ್ತು ಕಾಂಡಸೋರುವುದು ರೋಗದ ಗುಣಲಕ್ಷಣಗಳಾಗಿವೆ. ಇವುಗಳನ್ನು ಹತೋಟಿಯಲ್ಲಿಟ್ಟುಕೊಂಡು ತೆಂಗು ಬೇಸಾಯ ಮಾಡಬೇಕು ಎಂದರು.
ಕೃಷಿಕ ಸಮಾಜ ಅಧ್ಯಕ್ಷ ಕೆ.ಎನ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿ ಡಾ.ಆರ್.ಸಿದ್ದಪ್ಪ, ಡಾ.ಮುತ್ತುರಾಜ್ ಅವರು ತೆಂಗು ಬೇಸಾಯದ ಬಗ್ಗೆ ತಾಂತ್ರಿಕ ಉಪನ್ಯಾಸ ನೀಡಿದರು.
ಹಿರಿಯ ತೋಟಗಾರಿಕೆ ನಿರ್ದೇಶಕ ಎನ್.ಪ್ರಸನ್ನ, ಸಹಾಯಕ ತೋಟಗಾರಿಕೆ ಅಧಿಕಾರಿ ಕೆ.ಜಿ.ವಿದ್ಯಾಸಾಗರ್. ಪಿ.ರತೀಶ್, ರೈತ ಸಂಘದ ಮುಖಂಡ ಕೆ.ಪಿ.ಮಹದೇವು, ತಾ.ಪಂ. ಮಾಜಿ ಸದಸ್ಯ ಗೋಪಾಲೇಗೌಡ, ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕುಬೇರ, ತಾಲ್ಲೂಕು ಅಧ್ಯಕ್ಷ ಸಿ.ಆರ್.ರಮೇಶ್, ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಕೃಷಿಕ ಸಮಾಜದ ಸದಸ್ಯ ದೇವೇಗೌಡ, ಪದ್ಮರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.