ಬಂಧನ (ಸಾಂದರ್ಭಿಕ ಚಿತ್ರ)
ಹಲಗೂರು: ವ್ಯಕ್ತಿಯೊಬ್ಬನನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಕೃತ್ಯ ನಡೆದ 12 ತಾಸುಗಳಲ್ಲಿ ಬಂಧಿಸುವಲ್ಲಿ ಹಲಗೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಸೋನು ಪ್ರಿಯಾ, ಅನಿತಾ, ಜಯಮ್ಮ, ಚಿಕ್ಕತಾಯಮ್ಮ, ಸುನೀಲ್, ರಾಜು, ಸಂದೇಶ್ ಬಂಧಿತ ಆರೋಪಿಗಳು.
ಸಮೀಪದ ಕೊನ್ನಾಪುರ ಗ್ರಾಮದ ನಿವಾಸಿ ಗೋವರ್ಧನ್ ಮತ್ತು ಬೆಂಗಳೂರಿನಲ್ಲಿದ್ದ ಪತ್ನಿ ಸೋನು ಪ್ರಿಯಾ ನಡುವೆ ಗುರುವಾರ ರಾತ್ರಿ ಮೊಬೈಲ್ನಲ್ಲಿ ಮಾತಿನ ಚಕಮಕಿ ನಡೆದಿದೆ. ಕುಪಿತಗೊಂಡ ಸೋನು ಪ್ರಿಯಾ ಮತ್ತವರ ಸಹಚರರು ಮಧ್ಯ ರಾತ್ರಿ 2 ಗಂಟೆಯ ಸಮಯದಲ್ಲಿ ಕೊನ್ನಾಪುರಕ್ಕೆ ಟೆಂಪೊ ಟ್ರಾವೆಲರ್ನಲ್ಲಿ ಬಂದು, ಮನೆಯಲ್ಲಿ ಮಲಗಿದ್ದ ಗೋವರ್ಧನ್ ಮೇಲೆ ಹಲ್ಲೆ ನಡೆಸಿ, ಅಪಹರಣ ಮಾಡಿ, ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಚನ್ನಸಂದ್ರ ಬಡಾವಣೆಯಲ್ಲಿರುವ ಜಯಮ್ಮ ಅವರ ಮನೆಯಲ್ಲಿ ಗೋವರ್ಧನನ್ನು ಕೂಡಿಹಾಕಿದ್ದರು.
ಹಲಗೂರು ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್.ಶ್ರೀಧರ್ ಮಾರ್ಗದರ್ಶನದಲ್ಲಿ ಪಿಎಸ್ಐ ಲೋಕೇಶ ನೇತೃತ್ವದ ತಂಡ ಬೆಂಗಳೂರಿನಲ್ಲಿ ಗೃಹಬಂಧನದಲ್ಲಿಟ್ಟಿದ್ದ ಗೋವರ್ಧನ್ ಅವರನ್ನು ಶುಕ್ರವಾರ ಪತ್ತೆಹಚ್ಚಿದ್ದಾರೆ. ಗೋವರ್ಧನ್ ಗಾಯಗೊಂಡಿದ್ದು, ಮಳವಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏಳು ಆರೋಪಿಗಳನ್ನು ಶನಿವಾರ ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಆರೋಪಿ ಪಟ್ಟಿಯಲ್ಲಿರುವ, ಕಾನೂನು ಸಂಘರ್ಷಕ್ಕೆ ಸಿಲುಕಿರುವ ಬಾಲಕನೊಬ್ಬನನ್ನು ಮಂಡ್ಯದ ಬಾಲ ಮಂದಿರಕ್ಕೆ ಕಲುಹಿಸಲಾಯಿತು. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.