ADVERTISEMENT

ಕೆ.ಆರ್.ಪೇಟೆ: ಹೇಮಗಿರಿ ದನಗಳ ಜಾತ್ರೆ ವೈಭೋಗ

ಜನಾಕರ್ಷಿಸುತ್ತಿರುವ ಹಳ್ಳಿಕಾರ್ ತಳಿಯ ರಾಸುಗಳು: ಫೆ.9ರಂದು ತೆಪ್ಪೋತ್ಸವ

ಬಲ್ಲೇನಹಳ್ಳಿ ಮಂಜುನಾಥ
Published 31 ಜನವರಿ 2025, 7:28 IST
Last Updated 31 ಜನವರಿ 2025, 7:28 IST
ಕೆ.ಆರ್.ಪೇಟೆ  ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ ದನಗಳ ಜಾತ್ರೆ 
ಕೆ.ಆರ್.ಪೇಟೆ  ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ ದನಗಳ ಜಾತ್ರೆ    

ಕೆ.ಆರ್.ಪೇಟೆ: ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ಶ್ರೀಕ್ಷೇತ್ರದಲ್ಲಿ ದನಗಳ ಜಾತ್ರೆಯು ಮೈದೆಳೆದಿದ್ದು, ಜಾತ್ರಾಮಾಳ ರೈತರು ಮತ್ತು ದನಗಳಿಂದ ತುಂಬಿಹೋಗಿದ್ದು, ಹೇಮಗಿರಿ ಬೆಟ್ಟದ ಸುತ್ತಲೂ ಎಲ್ಲಿ ನೋಡಿದರಲ್ಲಿ ದನಗಳದ್ದೇ ಕಾರುಬಾರು.

ದೂರ-ದೂರದ ಊರುಗಳಿಂದ ಆಗಮಿಸಿರುವ ರೈತರು ತಾವು ಸಾಕಿನ ದನ ಕರುಗಳೊಂದಿಗೆ ಜಾತ್ರಾ ಮಾಳದಲ್ಲಿ ಕಳೆದ ಐದಾರು ದಿನಗಳಿಂದ ಬೀಡು ಬಿಟ್ಟಿದ್ದು ಹೇಮಾವತಿ ನದಿ ದಂಡೆ ದನಗಳ ಹಿಂಡಿನಿಂದ ತುಂಬಿ ಹೋಗಿದೆ.

ಪ್ರತಿವರ್ಷ ಹೇಮಗಿರಿಯಲ್ಲಿ ಜಾತ್ರೆ ನಡೆಯುತಿದ್ದು ಇಲ್ಲಿ ನಡೆಯುವ ದನಗಳ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ಕಲ್ಯಾಣ ವೆಂಕಟರಮಣಸ್ವಾಮಿ ಅವರ ಸಾನ್ನಿಧ್ಯವಿರುವ ಈ ಬೆಟ್ಟದಲ್ಲಿ ಭೃಗು ಮಹರ್ಷಿಗಳು ಪ್ರತಿಷ್ಠಾಪಿಸಿದ ತಿರುಪತಿ ತಿಮ್ಮಪ್ಪನನ್ನೇ ಹೋಲುವ ವಿಗ್ರಹ ಇದ್ದು ಬೆಟ್ಟದ ಮೇಲೆ ದೇವಸ್ಥಾನ ಇದೆ. ಸಾಕ್ಷಾತ್ ಮಹಾ ವಿಷ್ಣವೇ ಇಲ್ಲಿನ ನಯನ ಮನೋಹರ ದೃಶ್ಯಕ್ಕೆ ಶರಣಾಗಿ ನೋಡಲು ಬರುತ್ತಿದ್ದನೆಂದು, ಭೃಗು ಮಹರ್ಷಿಗಳು ತಪಸ್ಸು ಮಾಡಿ ಶ್ರೀಮನ್ನಾರಾಯಣನನ್ನು ತಪಸ್ಸು ಮಾಡಿ ಒಲಿಸಿಕೊಂಡ ಸ್ಥಳವೂ ಇದಾಗಿದೆ ಎಂದು ಪುರಾಣಗಳು ತಿಳಿಸುತ್ತವೆ.

ADVERTISEMENT

ತಿಂಗಳುಗಟ್ಟಲೆ ದನಗಳ ಜಾತ್ರೆ ನಡೆಯುತಿತ್ತು. ಈಗ ಒಂದು ವಾರ ದನಗಳು ಕಟ್ಟಿದ್ದರೆ ಅದೇ ದೊಡ್ಡದು ಎನ್ನುತ್ತಾರೆ ಬಂಡಿಹೊಳೆಯ ರೈತ ಮಹದೇವೇಗೌಡ. ಚುಂಚನಗಿರಿ ಜಾತ್ರೆಗೆ ಬಂದ ರೈತರು ಹೇಮಗಿರಿ ಜಾತ್ರೆಗೆ ಆಗಮಿಸಿ ಐದಾರು ದಿನ ಕಟ್ಟಿ ತೆರಳುವದು ವಾಡಿಕೆಯಾಗಿದೆ. ಈ ಬಾರಿ ಜ.26ರಿಂದಲೇ ದನಗಳ ಜಾತ್ರೆ ಆರಂಭವಾಗಿದ್ದು ಹಳ್ಳಿಕಾರ್ ತಳಿಯ ರಾಸುಗಳು ಸಾವಿರಾರು ಸಂಖ್ಯೆಯಲ್ಲಿ ಬೀಡು ಬಿಟ್ಟಿವೆ.

ಬಂಡೀಹೊಳೆ ಗ್ರಾಮದ ಬಿ.ಆರ್. ದರ್ಶನ್ ಎನ್ನುವವರಿಗೆ ಸೇರಿದ ಸುಮಾರು ₹3.5 ಲಕ್ಷ ಬೆಲೆ ಬಾಳುವ ಹಳ್ಳಿಕಾರ್ ಎತ್ತುಗಳು ಜಾತ್ರೆಯಲ್ಲಿ ಗಮನ ಸೆಳೆಯುತ್ತಿವೆ. ಬೆಟ್ಟದ ತಪ್ಪಲಿನಲ್ಲಿ ನೂರಾರು ಸಂಖ್ಯೆಯಲ್ಲಿ ಕಡ್ಲೆಪುರಿ ಮಿಠಾಯಿ ಅಂಗಡಿಗಳ ಸಾಲು ಸಾಲು ಇದೆ. ಫೆ.5ರಂದು ರಥೋತ್ಸವ ನಡೆಯಲಿದೆ.

ಕಲ್ಯಾಣ ವೆಂಕಟರಮಣಸ್ವಾಮಿ
ಫೆ.5ರಂದು ಬ್ರಹ್ಮರಥೋತ್ಸವ
ಪ್ರತಿ ವರ್ಷದಂತೆ ಮಾಘ ಮಾಸದ ರಥಸಪ್ತಮಿಯಂದು ಹೇಮಗಿರಿ ಕಲ್ಯಾಣ ವೆಂಕಟರಮಣಸ್ವಾಮಿಯವರ ಬ್ರಹ್ಮರಥೋತ್ಸವವು ಫೆ.5ರಂದು ನಡೆಯಲಿದ್ದು ಅದಕ್ಕಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ –ಕೈಂಕರ್ಯಗಳು ಜ.28ರಿಂದಲೇ ಅರ್ಚಕರಾದ ರಾಮಭಟ್ಟರ ನೇತೃತ್ವದಲ್ಲಿ ಆರಂಭವಾಗಿವೆ. ಕ್ಷೇತ್ರದ ಆರಾಧ್ಯ ದೈವ ಕಲ್ಯಾಣ ವೆಂಕಟರಮಣಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಬಂಡೀಹೊಳೆ ಗ್ರಾಮದಿಂದ ಹೇಮಗಿರಿ ಬೆಟ್ಟಕ್ಕೆ ತರಲಾಗಿದ್ದು ವಿವಿಧ ಪೂಜೆ ಹೋಮ ಹವನಗಳು ನಡೆದಿದೆ. ಫೆ.4ರಂದು ಮಧ್ಯಾಹ್ನ 1 ಗಂಟೆಗೆ ಕಲ್ಯಾಣ ವೆಂಕಟರಮಣ ಸ್ವಾಮಿಯ ದೇವರ ಉತ್ಸವವನ್ನು ಮಂಟಪಕ್ಕೆ ಬಿಜು ಮಾಡಿಸುವುದು. ಅದೇ ದಿನ ರಾತ್ರಿ 8 ಗಂಟೆಗೆ ದೇವರ ಉತ್ಸವ ಕಲ್ಯಾಣೋತ್ಸವ ನಡೆಯಲಿದೆ. ಫೆ.9ರಂದು ರಾತ್ರಿ 8 ಗಂಟೆಗೆ ಹೇಮಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.