
ಶ್ರೀರಂಗಪಟ್ಟಣ: ‘ಸತ್ಯ ಸಾಯಿಬಾಬಾ ಅವರ ಜನ್ಮ ಶತಮಾನೋತ್ಸವದ ನಿಮಿತ್ತ ಪಟ್ಟಣದ ಶ್ರೀ ಸಾಯಿ ಸೇವಾ ಅನಾಥಾಶ್ರಮದ ವತಿಯಿಂದ 100 ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಭರಿಸಲಾಗುವುದು’ ಎಂದು ಆಶ್ರಮದ ಮುಖ್ಯಸ್ಥ ಎಸ್.ಎಚ್. ಸಾಯಿಕುಮಾರ್ ಹೇಳಿದರು.
ಪಟ್ಟಣದ ಶ್ರೀ ಸಾಯಿ ಸೇವಾ ಅನಾಥಾಶ್ರಮದಲ್ಲಿ ಭಾನುವಾರ ಏರ್ಪಡಿಸಿದ್ದ ಸತ್ಯ ಸಾಯಿಬಾಬಾ ಅವರ ಜನ್ಮ ಶತಮಾನೋತ್ಸವದಲ್ಲಿ ಅವರು ಮಾತನಾಡಿದರು.
‘ಪಟ್ಟಣದ ಕಾವೇರಿ ವಿದ್ಯಾ ಶಾಲೆಯಲ್ಲಿ ಓದುತ್ತಿರುವ ವಿವಿಧ ಗ್ರಾಮಗಳ 100 ಬಡ ವಿದ್ಯಾರ್ಥಿಗಳ ₹1.50 ಲಕ್ಷ ಶುಲ್ಕವನ್ನು ಪಾವತಿಸಲಾಗುತ್ತದೆ. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರಿಂದ ವಿದ್ಯಾರ್ಥಿಗಳ ಪಟ್ಟಿ ಪಡೆದಿದ್ದು, ಸೋಮವಾರ ಅಷ್ಟೂ ಶುಲ್ಕವನ್ನು ಪಾವತಿಸಲಾಗುವುದು’ ಎಂದು ಅವರು ತಿಳಿಸಿದರು.
ಆಶ್ರಮದಲ್ಲಿ ಭಾನುವಾರ ನಡೆದ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ 100 ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಲೇಖನ ಸಾಮಗ್ರಿ, ಅಂಗನವಾಡಿ ಕೇಂದ್ರಗಳ 50 ಮಕ್ಕಳಿಗೆ ಹಾಸಿಗೆ, ಪಟ್ಟಣದ ಪೂರ್ಣಯ್ಯ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ವಿತರಿಸಲಾಯಿತು.
ಜ್ಯೋತಿಷಿ ವಿ. ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ಸತ್ಯಸಾಯಿ ಬಾಬಾ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಅಭಿಷೇಕ ಮತ್ತು ಸಾಮೂಹಿಕ ಭಜನೆಗಳು ನಡೆದವು. ಲಕ್ಷ್ಮೀ ಹಲಗಪ್ಪ, ಸಾಯಿ ಗಣೇಶ್, ಡಾ.ಸಾಯಿವೀರ್, ಕಿಶೋರ್, ನಂದನ್ ಇದ್ದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.