
ಪಾಂಡವಪುರ: ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ–ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ಹಲವು ಕಂಪನಿಗಳನ್ನು ಕ್ಷೇತ್ರಕ್ಕೆ ಕರೆತಂದು ‘ನೇಮಕಾತಿ ಅಭಿಯಾನ’ವನ್ನು ಆರಂಭಿಸಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ನೇಮಕಾತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಆಕಾಂಕ್ಷಿಗಳು ಹೆಸರು ನೋಂದಾಯಿಸಿಕೊಳ್ಳಲು ನ.1ರಂದು ವೆಬ್ ಪ್ರಾರಂಭಿಸಿತ್ತು. ಇದರಲ್ಲಿ 350ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. ಇದರ ಭಾಗವಾಗಿ ಮೈಸೂರಿನ ಟೆಕ್ನೋಟಾಸ್ಕ್ ಗ್ಲೋಬಲ್ ಕಂಪನಿ ವಾರದೊಳಗೆ ಉದ್ಯೋಗ ದೊರಕಿಸಿಕೊಡಲಿದ್ದು, ಮುಂದಿನ ದಿನಗಳಲ್ಲಿ ಈ ಕಂಪನಿ ಪಾಂಡವಪುರದಲ್ಲಿಯೂ ಶಾಖೆ ತೆರೆದು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲಿದೆ’ ಎಂದು ಹೇಳಿದರು.
ಪುಟ್ಟಣ್ಣಯ್ಯ ಫೌಂಡೇಶನ್ನ ಸ್ಮಿತಾ ಪುಟ್ಟಣ್ಣಯ್ಯ ಮಾತನಾಡಿ, ‘ಹಳ್ಳಿಗಳನ್ನು ಅಭಿವೃದ್ದಿಪಡಿಸಬೇಕೆಂಬ ಉದ್ದೇಶದಿಂದ ಪುಟ್ಟಣ್ಣಯ್ಯ ಫೌಂಡೇಶನ್ ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ಶಿಕ್ಷಣ, ಆರೋಗ್ಯ, ಉದ್ಯೋಗ, ರೈತರ ಅಭಿವೃದ್ಧಿ, ಮಾರುಕಟ್ಟೆ, ಸ್ವಯಂ ಉದ್ಯೋಗ, ಬಡತನ ನಿವಾರಣೆ ಸೇರಿದಂತೆ ಗ್ರಾಮೀಣ ಅಭಿವೃದ್ದಿಗೆ ಪೂರಕವಾಗಿ ಹಲವಾರು ಕಂಪನಿಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.
‘ಅಭಿಯಾದಲ್ಲಿ 350 ಮಂದಿ ಭಾಗವಹಿಸಿದ್ದು, ಈ ಪೈಕಿ ಸ್ಥಳದಲ್ಲೇ 51 ನಿರುದ್ಯೋಗಿಗಳಿಗೆ ನೇಮಕಾತಿ ಭರವಸೆ ಪತ್ರ ನೀಡಲಾಯಿತು. ಉಳಿದವರಿಗೆ ಒಂದು ವಾರದೊಳಗೆ ನೇಮಕಾತಿ ಪತ್ರ ನೀಡಲಾಗುವುದು’ ಎಂದು ಪುಟ್ಟಣ್ಣಯ್ಯ ಫೌಂಡೇಶನ್ ಕಾರ್ಯಕಾರಿ ನಿರ್ದೇಶಕ ರಣಜಿತ್ ನಾಗರಾಜೇಗೌಡ ತಿಳಿಸಿದರು.
ಟೆಕ್ನೋಟಾಸ್ಕ್ ಗ್ಲೋಬಲ್ ಕಂಪನಿಯ ದಕ್ಷಿಣ ಭಾರತ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಫಖ್, ರವಿಕುಮಾರ್, ಶಶಿಕಾಂತ್, ದೀಕ್ಷಿತ್, ಫೌಂಡೇಶನ್ ಕಾರ್ಯಕಾರಿ ನಿರ್ದೇಶಕ ರಣಜಿತ್ ನಾಗರಾಜೇಗೌಡ, ಮಾಧ್ಯಮ ಸಂಯೋಜಕ ಎಸ್.ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.