ADVERTISEMENT

‘ಜಾಮಿಯಾ ಮಸೀದಿ ಒಡೆದು...' ಹೇಳಿಕೆ: ಕಾಳಿ ಮಠದ ಋಷಿ ಕುಮಾರ ಸ್ವಾಮೀಜಿ ಬಂಧನ

ಶ್ರೀರಂಗಪಟ್ಟಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 12:17 IST
Last Updated 18 ಜನವರಿ 2022, 12:17 IST
ಋಷಿ ಕುಮಾರ ಸ್ವಾಮೀಜಿ ಮಸೀದಿ ಮುಂದೆ ಮಾತನಾಡುತ್ತಿರುವುದು
ಋಷಿ ಕುಮಾರ ಸ್ವಾಮೀಜಿ ಮಸೀದಿ ಮುಂದೆ ಮಾತನಾಡುತ್ತಿರುವುದು   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಐತಿಹಾಸಿಕ ಜಾಮಿಯಾ ಮಸೀದಿ ಒಡೆದು ಹನುಮ ಮಂದಿರ ನಿರ್ಮಿಸಬೇಕು’ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಕಾಳಿ ಮಠದ ಋಷಿಕುಮಾರ ಸ್ವಾಮೀಜಿಯನ್ನು ಮಂಗಳವಾರ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಾಳಿ ಮಠದಲ್ಲಿದ್ದ ಸ್ವಾಮೀಜಿಯನ್ನು ಮಂಗಳವಾರ ನಸುಕಿನಲ್ಲಿ ಬಂಧಿಸಿ ಶ್ರೀರಂಗಪಟ್ಟಣಕ್ಕೆ ಕರೆತರಲಾಗಿದೆ. ಈಚೆಗೆ ಅಪಘಾತದಲ್ಲಿ ಮೃತಪಟ್ಟ ಬಾಲಕಿ ಸಮನ್ವಿ ನಾಯ್ಡ ಅಪರ ಕರ್ಮ ನರವೇರಿಸಲು ಜ.16ರಂದು ಋಷಿಕುಮಾರ ಸ್ವಾಮೀಜಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಗೆ ಭೇಟಿ ನೀಡಿದ್ದರು. ಕಾರ್ಯ ನೆರವೇರಿಸಿದ ನಂತರ ಅವರು ಜಾಮಿಯಾ ಮಸೀದಿಯ ಮುಂದೆ ನಿಂತು ವಿಡಿಯೊ ಮಾಡಿದ್ದರು.

‘ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದಂತೆಯೇ ಈ ಮಸೀದಿಯನ್ನೂ ಒಡೆದು ಹನಮಂತನ ದೇವಾಲಯ ನಿರ್ಮಿಸಬೇಕು. ಅಲ್ಲಿ ರಾಮಮಂದಿರ, ಇಲ್ಲಿ ಹನುಮ ಮಂದಿರ ನಿರ್ಮಾಣಗೊಳ್ಳಬೇಕು. ಈ ಕಾರ್ಯ ಪೂರ್ಣಗೊಳಿಸಲು ಎಲ್ಲಾ ಹಿಂದೂ ಸಂಘಟನೆಗಳು ಒಂದಾಗಬೇಕು’ ಎಂದು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು.

ADVERTISEMENT

ಜಾಮಿಯಾ ಮಸೀದಿಯು ‌ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ಸುಪರ್ದಿಯಲ್ಲಿದೆ. ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ವಿಡಿಯೊ ಹರಿದಾಡುತ್ತಿರುವುದನ್ನು ಗಮನಿಸಿದ ಇಲಾಖೆ ಸಿಬ್ಬಂದಿ ಯತಿರಾಜ್‌ ಸೋಮವಾರ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಚಿಕ್ಕಮಗಳೂರಿಗೆ ತೆರಳಿದ್ದ ಪೊಲೀಸರು ಮಂಗಳವಾರ ನಸುಕಿನ 4 ಗಂಟೆಯ ವೇಳೆಯಲ್ಲಿ ಬಂಧಿಸಿ ಕರೆತಂದಿದ್ದಾರೆ.

ಜಾಮೀನು ಅರ್ಜಿ ಸಲ್ಲಿಕೆ: ಸ್ವಾಮೀಜಿ ಬಿಡುಗಡೆ ಕೋರಿ ವಕೀಲ ಬಾಲರಾಜ್‌ ಮಂಗಳವಾರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು. ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ಕೋರ್ಟ್‌ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.