
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಬೃಂದಾವನದಲ್ಲಿ ‘ಸಂಗೀತ ನೃತ್ಯ ಕಾರಂಜಿ’ ಭಾನುವಾರ ಸಂಜೆ ಆರಂಭಗೊಳ್ಳದ ಕಾರಣ ಪ್ರವಾಸಿಗರು ಪ್ರವೇಶ ಶುಲ್ಕ ವಾಪಸ್ ಕೊಡುವಂತೆ ಟಿಕೆಟ್ ಕೌಂಟರ್ ಬಳಿ ಜಮಾಯಿಸಿದ್ದರು
ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಆರ್ಎಸ್ ಬೃಂದಾವನದಲ್ಲಿರುವ ‘ಸಂಗೀತ ನೃತ್ಯ ಕಾರಂಜಿ’ ಭಾನುವಾರ ಸಂಜೆ ಚಾಲನೆಗೊಳ್ಳದ ಕಾರಣ ಪ್ರವಾಸಿಗರು ನಿರಾಸೆ ಅನುಭವಿಸಿದ್ದು, ಪ್ರವೇಶ ಶುಲ್ಕ ವಾಪಸ್ ಕೊಡುವಂತೆ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.
ಬೃಂದಾವನದ ಪ್ರವೇಶ ದ್ವಾರದ ಬಳಿಯ ಟಿಕೆಟ್ ಕೌಂಟರ್ ಬಳಿ ಜಮಾಯಿಸಿದ ಪ್ರವಾಸಿಗರು ಹಣ ವಾಪಸ್ ಕೊಡುವಂತೆ ಆಗ್ರಹಿಸಿದರು. ‘ಹಣ ಕೊಡಲು ಸಾಧ್ಯವಿಲ್ಲ’ ಎಂದು ಹೇಳಿದ ಟಿಕೆಟ್ ಕೌಂಟರ್ ಸಿಬ್ಬಂದಿಯ ವಿರುದ್ಧ ರಾಜ್ಯ ಮತ್ತು ಹೊರ ರಾಜ್ಯಗಳ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್ ಹಣ ವಾಪಸ್ ಕೇಳಿದ ಪ್ರವಾಸಿಗರ ಬಗ್ಗೆ ಟಿಕೆಟ್ ಕೌಂಟರ್ ಸಿಬ್ಬಂದಿ ಲಘುವಾಗಿ ಮಾತನಾಡಿದರು ಎಂಬ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ತಳ್ಳಾಟ, ನೂಕಾಟವೂ ಆಗಿದೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆ.ಎಸ್.ಐ.ಎಸ್.ಎಫ್) ಮತ್ತು ಸಿವಿಲ್ ಪೊಲೀಸರು ಪ್ರವಾಸಿಗರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು.
‘ಸಂಗೀತ ನೃತ್ಯ ಕಾರಂಜಿ ಘಟಕದಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಸಂಜೆ 7 ಗಂಟೆಯಿಂದ ಸತತ ಪ್ರಯತ್ನ ನಡೆಸಿದರೂ ಚಾಲೂ ಆಗಿಲ್ಲ. ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ಬೃಂದಾವನದ ಸಿಬ್ಬಂದಿ ತಿಳಿಸಿದರು.
‘ಕೆಆರ್ಎಸ್ ಬೃಂದಾವನ ಮತ್ತು ಸಂಗೀತ ಕಾರಂಜಿ ವೀಕ್ಷಣೆಗೆ ಬೆಂಗಳೂರಿನಿಂದ ಬಂದಿದ್ದೇನೆ. ಟೋಲ್ ಶುಲ್ಕದ ಜತೆಗೆ ₹100 ಪ್ರವೇಶ ಶುಲ್ಕವನ್ನೂ ಕೊಟ್ಟಿದ್ದೇನೆ. ಸಂಗೀತ ನೃತ್ಯ ಕಾರಂಜಿಯ ಪ್ರದರ್ಶನ ಇಲ್ಲ ಎಂದು ತಿಳಿಸದೆ ನಮ್ಮಿಂದ ಶುಲ್ಕ ಪಡೆದಿರುವುದು ತಪ್ಪು. ಹಣ ವಾಪಸ್ ಕೇಳಿದ್ದಕ್ಕೆ ಟಿಕೆಟ್ ಕೌಂಟರ್ ಸಿಬ್ಬಂದಿ ನಮ್ಮನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿದರು’ ಎಂದು ಬೆಂಗಳೂರಿನಿಂದ ಬಂದಿದ್ದ ರಾಜೇಂದ್ರಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
‘ಸರ್ಕಾರಿ ರಜೆ ಮತ್ತು ಭಾನುವಾರದಂದು ಸಂಜೆ 7ರಿಂದ ರಾತ್ರಿ 9 ಗಂಟೆವರೆಗೂ ಸಂಗೀತ ನೃತ್ಯ ಕಾರಂಜಿ ಪ್ರದರ್ಶನ ಇರುತ್ತದೆ. ಹೆಚ್ಚಿನ ಪ್ರವಾಸಿಗರೂ ಭೇಟಿ ನೀಡುತ್ತಾರೆ. ಪ್ರವಾಸಿಗರಿಂದ ಹಣ ಪಡೆಯುವ ಕಾವೇರಿ ನೀರಾವರಿ ನಿಗಮ ಸಂಗೀತ ನೃತ್ಯ ಕಾರಂಜಿಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಲ್ಲಿ ವಿಫಲವಾಗಿದೆ’ ಎಂದು ಪ್ರವಾಸಿಗರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.