ADVERTISEMENT

ಮಳವಳ್ಳಿ|11 ವರ್ಷಗಳ ನಂತರ ದೊಡ್ಡಹಬ್ಬ: ಕುಲ್ಕುಣಿ ಗ್ರಾಮದಲ್ಲಿ ಅದ್ದೂರಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 5:08 IST
Last Updated 15 ಜನವರಿ 2026, 5:08 IST
ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿರುವ ವಿಜಯ ನಗರೇಶ್ವರಿ ದೇವಾಲಯ
ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿರುವ ವಿಜಯ ನಗರೇಶ್ವರಿ ದೇವಾಲಯ   

ಮಳವಳ್ಳಿ: ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ 11 ವರ್ಷಗಳ ನಂತರ ನಡೆಯುತ್ತಿರುವ ಸಪ್ತಮಾತೃಕೆಯರ ದೊಡ್ಡಹಬ್ಬಕ್ಕೆ ಜ.15ರಿಂದ ಚಾಲನೆ ದೊರೆಯಲಿದೆ. ಹಬ್ಬ ಆಚರಿಸಲು ಕಲ್ಕುಣಿ ಸೇರಿದಂತೆ ಏಳು ಗ್ರಾಮಗಳು ಅಲಂಕೃತಗೊಂಡಿವೆ. 

ಮಹಾಶಕ್ತಿ ಹಾಗೂ ಹಿರಿಯ ಮಂಚದ ಕಾಳಿಕಾಂಬಾ, ವಿಜಯನಗರೇಶ್ವರಿ, ಮನೆಯಮ್ಮ (ಲಕ್ಷ್ಮೀದೇವಿ), ಬೆಟ್ಟದ ಅರಸಮ್ಮ, ಕನ್ನಕಡ್ಡಯ್ಯ, ಮುಖದ ದೇವರು, ಮೂಗದೇವಮ್ಮ, ಪಟ್ಟಲದಮ್ಮ ಎಂಬ ದೇವತೆಗಳ ಸಪ್ತ ಮಾತೃಕೆಯರ ಹಬ್ಬಕ್ಕೆ (ದೊಡ್ಡಹಬ್ಬ) ಅದ್ದೂರಿ ತಯಾರಿ ನಡೆದಿದೆ.

ಅನಾದಿ ಕಾಲದಿಂದಲೂ ಕಲ್ಕುಣಿ, ದೊಡ್ಡಗೌಡನಕೊಪ್ಪಲು, ಚಿಕ್ಕಮಾಳಿಗೆಕೊಪ್ಪಲು, ಪುಟ್ಟೇಗೌಡನಕೊಪ್ಪಲು, ಚಿಕ್ಕಕಲ್ಕುಣಿ ಸೇರಿದಂತೆ ಹಲವು ಗ್ರಾಮಗಳ ಜನರು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಪ್ರತಿ ಐದು ವರ್ಷಗಳೊಮ್ಮೆ ನಡೆಯುತ್ತಿದ್ದ ಹಬ್ಬವು 11 ವರ್ಷಗಳ ನಂತರ ಈ ಬಾರಿ ನಡೆಯುತ್ತಿದೆ.

ADVERTISEMENT

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎನ್. ನಂಜೇಗೌಡ ಮಾತನಾಡಿ, ‘ಮೈಸೂರು ರಾಜ ಮನೆತನದ ರಾಜಗುರುಗಳ ವಂಶಸ್ಥರು ನೆಲೆಸಿದ್ದರು ಎಂಬುದು ಸೇರಿದಂತೆ ಅನೇಕ ಐತಿಹಾಸಿಕ ಕುರುಹುಗಳು ಕಲ್ಕುಣಿಯಲ್ಲಿವೆ. ಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ. ಪರಮೇಶ್ವರನು ವಿವಿಧ ನಾಮಗಳಿಂದ ನೆಲೆಗೊಂಡಿರುವ ಪುಣ್ಯ ಭೂಮಿ ಎಂದೇ ಈ ಗ್ರಾಮ ಪ್ರಸಿದ್ಧಿಗೊಂಡಿದೆ’ ಎಂದು ವಿವರಿಸಿದರು.

ಆಡಳಿತ ಮಂಡಳಿ ಸದಸ್ಯ ಕೆ.ಜೆ.ದೇವರಾಜು ಮಾತನಾಡಿ, 9 ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಯಾವುದೇ ತೊಂದರೆಯಾಗದಂತೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಸಲಹೆ ಮತ್ತು ಸಹಕಾರದೊಂದಿಗೆ ವಿವಿಧ ಇಲಾಖೆಗಳ ನೆರವಿನೊಂದಿಗೆ ಸ್ವಚ್ಛತೆ ಹಾಗೂ ಕುಡಿಯುವ ನೀರು, ಸಮರ್ಪಕ ವಿದ್ಯುತ್ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ಗ್ರಾ.ಪಂ.ಉಪಾಧ್ಯಕ್ಷ ಮಾದನಾಯಕ್, ಸದಸ್ಯ ಪರಮೇಶ್, ಕಾರ್ಯದರ್ಶಿ ಮಲ್ಲಯ್ಯ, ಮುಖಂಡರಾದ ಸೋಮಶೇಖರ್, ಚಂದನ್, ಮಹದೇವು ಪಾಲ್ಗೊಂಡಿದ್ದರು.

ವಿವಿಧ ಧಾರ್ಮಿಕ ಕಾರ್ಯಕ್ರಮ

ಜ.15ರ ಗುರುವಾರ ಗ್ರಾಮದ ರಂಗದ ಆವರಣದಲ್ಲಿ ಧೂಳು ಮರಿ ಒಡೆದು ರಸಮುದ್ದೆ ತಯಾರಿಸಿ ಎಲ್ಲ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ನಂತರ ದೊಡ್ಡಕೆರೆಯಿಂದ ವಿಜಯನಗರೇಶ್ವರಿ ದೇವರನ್ನು ಕೇಲು ತರುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಜ.16ರಂದು ವಿಜಯನಗರೇಶ್ವರಿ ದೇವಸ್ಥಾನದಿಂದ ಹೆಬ್ಬಾರೆಗಳನ್ನು ತೆಗೆದುಕೊಂಡು ದೇವರ ಉತ್ಸವಮೂರ್ತಿಗಳ ಮೆರವಣಿಗೆ ಜ.17ರಂದು ಕಂಚಿನ ಹೆಬ್ಬಾರೆಯೊಂದಿಗೆ ದೊಡ್ಡೇಗೌಡನಕೊಪ್ಪಲು ಹಾಗೂ ಚಿಕ್ಕಮಾಳಿಗೆಕೊಪ್ಪಲು ಗ್ರಾಮಗಳಲ್ಲಿ ಪೂಜೆ ಜ.18ರಂದು ಪುಟ್ಟೇಗೌಡನಕೊಪ್ಪಲು ಒಂಟಿಮನೆಕೊಪ್ಪಲು ಸಿ.ವಿ. ಕೊಪ್ಪಲು ಹೋಗಿ ಹಕ್ಕುಪಡಿ ಪಡೆಯುವುದು ಹಾಗೂ ಚಂದ್ರಮಂಡಲ ನಿರ್ಮಿಸಲಾಗುತ್ತದೆ.

ಜ.19ರಂದು ವಿವಿಧ ಜಾನಪದ ಕಲಾತಂಡಗಳೊಂದಿಗೆ ದೇವರ ಉತ್ಸವಮೂರ್ತಿಗಳ ಮೆರವಣಿಗೆ ಜ.20 21 ಮತ್ತು 22ರಂದು ಕಲ್ಕುಣಿ ಮಯೂರ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಪಿ.ನಾಗರತ್ನಮ್ಮ ಅವರು ಬರೆದಿರುವ ಕಲ್ಕುಣಿ ನಾಡು ಮತ್ತು ದೊಡ್ಡಹಬ್ಬದ ಆಚರಣೆಯ ವಿಧಿವಿಧಾನಗಳ ಪುಸ್ತಕ ಬಿಡುಗಡೆ ನಡೆಯಲಿದೆ. ಜ.23ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೊಡ್ಡೇಗೌಡನಕೊಪ್ಪಲು ಹಾಗೂ ಚಿಕ್ಕಮಾಳಿಗೆಕೊಪ್ಪಲು ಗ್ರಾಮಸ್ಥರಿಂದ ರಾವಳೇಶ್ವರ (ಊರಮುಂದಲಯ್ಯ) ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.