ADVERTISEMENT

ಸಂತೇಬಾಚಹಳ್ಳಿ: ಚಿರತೆ ದಾಳಿ; ರೈತನ ಸಾವು

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 13:17 IST
Last Updated 22 ಜನವರಿ 2023, 13:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಂತೇಬಾಚಹಳ್ಳಿ: ರಾತ್ರಿಯ ವೇಳೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರ ಮೇಲೆ ಚಿರತೆ ದಾಳಿ ಮಾಡಿರುವ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಬಿ.ಗಂಗನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಮರೀಗೌಡರ ಮಗ ಮಾಯಪ್ಪ (37) ಮೃತದೇಹ ಕೊಳೆತ ಸ್ಥಿತಿಯಲ್ಲಿ ಜಮೀನಿನ ಪಕ್ಕದ ಗುಡ್ಡದ ಬಳಿ ಈಚೆಗೆ ಪತ್ತೆಯಾಗಿತ್ತು. ಕೃಷಿಯ ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದ ಅವರು ಕಳೆದೊಂದು ವಾರದಿಂದ ಮನೆಗೆ ಬಂದಿರಲಿಲ್ಲ. ಕೆಲಸಕ್ಕೆ ತೆರಳಿರಬಹುದು ಎಂದು ಮನೆಯವರು ಭಾವಿಸಿದ್ದರು. ಸರ್ವೆ 31ರ ಗುಡ್ಡದ ಬಳಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಮಾಯಪ್ಪ ಅವರ ಮೃತದೇಹ ಎಂದು ಅವರ ಪತ್ನಿ ರೇಖಾ ಹಾಗೂ ಕುಟುಂಬಸ್ಥರು ಗುರುತಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಕಿಕ್ಕೇರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಚಿರತೆ ದಾಳಿಯಿಂದ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದರು. ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡ ಕಾರಣ ಬೋನು ಇಡಲಾಗಿತ್ತು. ಆಗಾಗ ಚಿರತೆ ಓಡಾಡುವ ಬಗ್ಗೆ ಅಕ್ಕಪಕ್ಕದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ADVERTISEMENT

ವಲಯ ಅರಣ್ಯಾಧಿಕಾರಿ ಎಚ್‌.ಎಸ್‌.ಗಂಗಾಧರ್ ಗ್ರಾಮಕ್ಕೆ ಭೇಟಿ ನೀಡಿ ಮಾಯಪ್ಪ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇಲಾಖೆಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆ ದಾಳಿ ತಡೆಯುವಂತೆ ಅಕ್ಕಪಕ್ಕದ ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.