ಮಂಡ್ಯ: ಸಕ್ಕರೆ ನಾಡಿನಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿನಲ್ಲಿ ‘ಕನ್ನಡ ಭವನ’ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಭವನ ಕಟ್ಟಲು ಆಯ್ಕೆ ಮಾಡಿರುವ ಜಾಗದ ಬಗ್ಗೆ ವಾಲಿಬಾಲ್ ಕ್ರೀಡಾಪಟುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮಂಡ್ಯ ನಗರದಲ್ಲಿರುವ ಜಿಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣದ ಪಕ್ಕದ ಜಾಗವನ್ನು ಜಿಲ್ಲಾಡಳಿತ ಆಯ್ಕೆ ಮಾಡಿಕೊಂಡಿದೆ. ಈ ಜಾಗದಲ್ಲಿ ಭವನ ನಿರ್ಮಾಣ ಮಾಡಿದರೆ ವಾಲಿಬಾಲ್ ಮತ್ತು ಇತರೆ ಕ್ರೀಡಾ ಚಟುವಟಿಕೆಗಳಿಗೆ ಧಕ್ಕೆಯಾಗುತ್ತದೆ ಎಂಬುದು ಕ್ರೀಡಾಪ್ರೇಮಿಗಳ ವಾದ.
‘ಈ ಸ್ಥಳ ಬಿಟ್ಟು ಬೇರೆ ಎಲ್ಲೂ ವಾಲಿಬಾಲ್ ಅಂಕಣಗಳನ್ನು ನಿರ್ಮಿಸಲು ಸೂಕ್ತ ಜಾಗವಿಲ್ಲ. ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಈಗಿರುವ ಸ್ಥಳವೇ ಸಾಕಾಗುವುದಿಲ್ಲ. ಜಿಲ್ಲಾ ಕ್ರೀಡಾಂಗಣದ ಸುತ್ತಮುತ್ತ 400 ಮೀಟರ್ ಅಂತರದಲ್ಲಿ ಕಲಾ ಭವನ, ಗಾಂಧಿ ಭವನ, ಕರ್ನಾಟಕ ಭವನ, ಶಿಕ್ಷಕರ ಭವನ, ಡಾ.ಬಿ.ಆರ್. ಅಂಬೇಡ್ಕರ್ ಭವನ, ಬಾಲ ಭವನ ಮತ್ತು ರೈತ ಭವನ ಸೇರಿದಂತೆ ಒಟ್ಟು 7 ಭವನಗಳಿವೆ. ಈ ಸ್ಥಳವನ್ನು ಕ್ರೀಡಾ ಚಟುವಟಿಕೆಗೆ ಮೀಸಲಿಡಬೇಕು’ ಎಂದು ಮಂಡ್ಯ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
₹5 ಕೋಟಿ ಅನುದಾನ: ‘ಕನ್ನಡ ಭವನ ನಿರ್ಮಾಣಕ್ಕೆ ಸಾಹಿತ್ಯ ಸಮ್ಮೇಳನದ ಉಳಿತಾಯ ಹಣ ₹2.20 ಕೋಟಿ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಶಾಸಕರ ಅನುದಾನದಡಿ ದಿನೇಶ್ ಗೂಳಿಗೌಡ, ರಮೇಶ ಬಂಡಿಸಿದ್ದೇಗೌಡ ಹಾಗೂ ಪಿ. ರವಿಕುಮಾರ್ ಅವರು ತಲಾ ₹1 ಕೋಟಿ ಅನುದಾನ ಕೊಡಲು ಒಪ್ಪಿರುತ್ತಾರೆ. ಹೀಗಾಗಿ ₹5 ಕೋಟಿ ಅನುದಾನದಲ್ಲಿ ಭವ್ಯ ಕನ್ನಡ ಭವನವನ್ನು ನಿರ್ಮಾಣ ಮಾಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಈಚೆಗೆ ತಿಳಿಸಿದ್ದಾರೆ.
ಭವನದ ವಿನ್ಯಾಸ: ಕನ್ನಡ ಭವನವನ್ನು 20,925 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಭವನದಲ್ಲಿ ಮುಖ್ಯ ಹಾಲ್, ಸ್ಟೇಜ್, ಬ್ಯಾಕ್ ಸ್ಟೇಜ್, ಗ್ರೀನ್ ರೂಂ, ತಾಂತ್ರಿಕ ಅಥವಾ ಎಲೆಕ್ಟ್ರಿಕಲ್ ನಿರ್ವಹಣಾ ಕೊಠಡಿ, ತರಬೇತಿ ಕೊಠಡಿ, ಕಚೇರಿ, ಶೌಚಾಲಯಗಳು, ಪ್ರೊಜೆಕ್ಟರ್ ಕೊಠಡಿಗಳು ಇರಲಿವೆ. ಕನ್ನಡ ಭವನವು ನಾಡು–ನುಡಿ ಸಾಹಿತ್ಯ ಚಿಂತನೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ನಾಂದಿಯಾಗಲಿದೆ ಎಂಬ ಆಶಯವನ್ನು ಹೊಂದಲಾಗಿದೆ.
ಒಳಾಂಗಣ ಕ್ರೀಡಾಂಗಣ ಪಕ್ಕದಲ್ಲಿ ಎರಡು ವಾಲಿಬಾಲ್ ಕ್ರೀಡಾಂಗಣಗಳ ಜೊತೆಗೆ ಕನ್ನಡ ಭವನವನ್ನೂ ಕಟ್ಟಲು ಜಾಗವಿದೆ. ತಾಂತ್ರಿಕ ವರದಿ ಪಡೆದಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ– ಕುಮಾರ ಜಿಲ್ಲಾಧಿಕಾರಿ ಮಂಡ್ಯ
ಕ್ರೀಡೆಗೆ ಮೀಸಲಾದ ಜಾಗದಲ್ಲಿ ಕನ್ನಡ ಭವನ ಕಟ್ಟುವುದು ಸರಿಯಲ್ಲ. ಈ ಜಾಗವು ವಾಲಿಬಾಲ್ ಸೇರಿದಂತೆ ಇತರೆ ಕ್ರೀಡೆಗಳ ತರಬೇತಿ ಮತ್ತು ಪಂದ್ಯಾವಳಿ ನಡೆಸಲು ಸೂಕ್ತವಾಗಿದೆ– ಎಂ.ಕೆ.ಸೋಮಶೇಖರ್ ಕಾರ್ಯದರ್ಶಿ ಮಂಡ್ಯ ಜಿಲ್ಲಾ ವಾಲಿಬಾಲ್ ಸಂಸ್ಥೆ
ನಗರಸಭೆಗೆ ಸೇರಿದ ಗಾಂಧಿನಗರದ ‘ಪಂಪ್ಹೌಸ್’ ಆವರಣವು 8 ಎಕರೆಯಿದ್ದು ಇಲ್ಲಿ ಕನ್ನಡ ಭವನ ಅಮೃತಭವನ ನಿರ್ಮಿಸಬಹುದು. ಉಳಿದ ಜಾಗದಲ್ಲಿ ಕ್ರೀಡೆಗೂ ಅವಕಾಶ ಕಲ್ಪಿಸಬಹುದು– ನಾಗಣ್ಣಗೌಡ ಮುಖಂಡ ಕರುನಾಡ ಸೇವಕರು ಸಂಘಟನೆ
ವಾಲಿಬಾಲ್ ಅಂಕಣ’ ನಿರ್ಮಾಣ ನನೆಗುದಿಗೆ!
ಮಂಡ್ಯ ನಗರದ ಒಳಾಂಗಣ ಕ್ರೀಡಾಂಗಣ ಜಾಗದಲ್ಲಿ ಎರಡು ಸುಸಜ್ಜಿತ ‘ವಾಲಿಬಾಲ್ ಅಂಕಣ’ ನಿರ್ಮಿಸಲು ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ₹28 ಲಕ್ಷ ಹಂಚಿಕೆ ಮಾಡಿದ್ದರೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. 2022ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾಲಿಬಾಲ್ ಸಂಸ್ಥೆ ಮನವಿ ಮಾಡಿತ್ತು. ನಂತರ ನಿರ್ಮಿತಿ ಕೇಂದ್ರದವರು ₹64 ಲಕ್ಷ ವೆಚ್ಚದಲ್ಲಿ ವಾಲಿಬಾಲ್ ಅಂಕಣ ಆಸನಗಳ ವ್ಯವಸ್ಥೆ ಹಾಗೂ ಉಡುಪು ಬದಲಾವಣೆ ಕೊಠಡಿ ನಿರ್ಮಾಣ ಕಾಮಗಾರಿಯ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದರು. ‘₹28 ಲಕ್ಷ ಅನುದಾನ ಕ್ರೀಡಾ ಇಲಾಖೆಗೆ ಬಂದು 6 ತಿಂಗಳಾದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕ್ರೀಡೆಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ’ ಎಂದು ಮಂಡ್ಯ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಶಿವಲಿಂಗಯ್ಯ ಮತ್ತು ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.