
ಮಂಡ್ಯ: ‘ಕವಿತ್ವದ ಗುಣ ಕನ್ನಡಿಗರಲ್ಲಿ ಇರುವುದರಿಂದ ಕಾವ್ಯ ರಚಿಸುವ ಶಕ್ತಿ ಹಾಸು ಹೊಕ್ಕಾಗಿದೆ’ ಎಂದು ಮೈಸೂರು ಸಾಹಿತಿ ಸುಜಾತಾ ಅಕ್ಕಿ ಅಭಿಪ್ರಾಯಪಟ್ಟರು.
ನಗರದ ಗಾಂಧಿ ಭವನದಲ್ಲಿ ಪರಿಚಯ ಪ್ರಕಾಶನದ ವತಿಯಿಂದ ಗುರುವಾರ ನಡೆದ ‘ಅಕ್ಷರ ಹೊಸ ಕಾವ್ಯ-ವಸಂತ ಕವಿಗೋಷ್ಠಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕವಿಗಳು ಕಾವ್ಯದ ಮೂಲಕ ಜನರ ನೋವುಗಳನ್ನು ಅಭಿವ್ಯಕ್ತಿಸುವುದಲ್ಲದೆ, ಸಮಾಜಕ್ಕೆ ಸಂದೇಶ ನೀಡುತ್ತಾರೆ. ಜನಪದ ಸಾಹಿತ್ಯದ ರಚನೆಯ ಹಿಂದೆ ಕೂಡ ಅನಕ್ಷರಸ್ಥ ಸೃಜನಶೀಲ ತಾಯಿಯ ಮನಸು ಇರುವುದನ್ನು ಕಾಣಬಹುದು. 12ನೇ ಶತಮಾನದಲ್ಲಿ ಭಕ್ತಿರಸದ ಜೊತೆಗೆ ನವರಸಗಳನ್ನು ಸೇರಿಸಿ ಸಾಹಿತ್ಯ ರಚನೆ ಮಾಡಿರುವ ನಿದರ್ಶನ ಸಾಹಿತ್ಯ ಚರಿತ್ರೆಯಲ್ಲಿದೆ ಎಂದು ತಿಳಿಸಿದರು.
ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ‘ಅಕ್ಷರ ಹೊಸ ಕಾವ್ಯ ಕವಿಗೋಷ್ಠಿಯು ಸಮಗ್ರ ಮಂಡ್ಯದ ತಲ್ಲಣಗಳನ್ನು ಸಮರ್ಥವಾಗಿ ಬಿಂಬಿಸಿದೆ. ಆ ಮೂಲಕ ಭ್ರಷ್ಟಾಚಾರ, ಕೋಮುವಾದ, ಮಕ್ಕಳ ಮತ್ತು ಸ್ತ್ರೀಯರ ಮೇಲಿನ ಶೋಷಣೆ, ಭ್ರೂಣ ಹತ್ಯೆ ಹಾಗೂ ರೈತರ ತಲ್ಲಣಗಳಿಗೆ ಕವಿಗಳು ಗಟ್ಟಿಯಾದ ದನಿಯಾಗಿ ತಮ್ಮ ಜೀವಪರತೆ ಮೆರೆದಿದ್ದಾರೆ’ ಎಂದರು.
ಭವಾನಿ ಲೋಕೇಶ್, ಗಣಂಗೂರು ನಂಜೇಗೌಡ, ಬಿ.ಟಿ.ವಿಶ್ವನಾಥ್, ಶುಭಶ್ರೀ ಪ್ರಸಾದ್, ನಂದಾದೀಪ, ಕೆ.ಪಿ.ರತಿಕುಮಾರಿ, ಡೇವಿಡ್ ಪ್ರತಿಭಾಂಜಲಿ, ಚಂದ್ರು ಮಂಡ್ಯ, ಆಶಾ ಹನಿಯಂಬಾಡಿ, ಸದ್ದಾಂ ಹುಸೇನ್, ಎನ್.ಧನಂಜಯ, ಸುಪ್ರಿಯ ಶಿವಣ್ಣ, ಸಿದ್ದು ಹಾದನೂರು, ಪ್ರಶಾಂತ್ ಬೆಳತೂರು, ಲೋಕೇಶ್ ಕಲ್ಕುಣಿಕೆ, ಅಪ್ಪಾಜಿ ಕೆ.ಶೆಟ್ಟಳ್ಳಿ, ಕೆ.ಕೆ.ವರದರಾಜು, ಪುಷ್ಪಲತಾ ಸ್ವರ್ಣಸಂದ್ರ, ಸುಧಾಮಣಿ ಜಯಪ್ಪ, ಬಸಪ್ಪ ಸಾಸಲಮರಿ ಕ್ಯಾಂಪ್, ಅರವಿಂದ ಪ್ರಭು ಕವಿತೆ ವಾಚಿಸಿದರು.
ಕಾರ್ಯಕ್ರಮದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ. ಹನುಮಂತು, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ. ವಿನಯ್ ಕುಮಾರ್, ಸಂಸ್ಕೃತಿ ಚಿಂತಕ ಪ್ರೊ.ಪ್ರಸನ್ನಕುಮಾರ್ ಕೆರಗೋಡು, ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥ ಎಚ್.ಎಸ್. ಧನುಷ್ಗೌಡ, ಪರಿಚಯ ಪ್ರಕಾಶನದ ಸಂಸ್ಥಾಪಕ ಎಂ.ಎನ್. ಶಿವಕುಮಾರ್ ಆರಾಧ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.