ADVERTISEMENT

ಮಂಡ್ಯ: ಪಾಂಡವಪುರದಲ್ಲಿ ಗುರುವಾರ ಕೇಳಿಸಿದ್ದ ಭಾರಿ ಸದ್ದಿಗೆ ಕಲ್ಲು ಸ್ಫೋಟ ಕಾರಣ!

ಪಾಂಡವಪುರ ತಾಲ್ಲೂಕಿನಲ್ಲಿ ಕೇಳಿ ಬಂದಿದ್ದ ಭಾರಿ ಶಬ್ದ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 9:30 IST
Last Updated 14 ಆಗಸ್ಟ್ 2021, 9:30 IST
ಪಾಂಡವಪುರ ತಾಲ್ಲೂಕಿನಲ್ಲಿ ಕೇಳಿ ಬಂದ ಭಾರಿ ಶಬ್ದ ಸಂಬಂಧ ನಾರಾಯಣಪುರ ಬಳಿಯ ಹೊಸಹಳ್ಳಿಯ ಪುಟ್ಟರಾಜು ಜಮೀನಿನಲ್ಲಿ ಪರಿಶೀಲಿಸಿದ ಅಧಿಕಾರಿಗಳು
ಪಾಂಡವಪುರ ತಾಲ್ಲೂಕಿನಲ್ಲಿ ಕೇಳಿ ಬಂದ ಭಾರಿ ಶಬ್ದ ಸಂಬಂಧ ನಾರಾಯಣಪುರ ಬಳಿಯ ಹೊಸಹಳ್ಳಿಯ ಪುಟ್ಟರಾಜು ಜಮೀನಿನಲ್ಲಿ ಪರಿಶೀಲಿಸಿದ ಅಧಿಕಾರಿಗಳು   

ಪಾಂಡವಪುರ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಕೇಳಿ ಬಂದ ಶಬ್ದವು ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಕಡೆಯಿಂದ ಬಂದಿದೆ.

ಶಬ್ದದ ಮೂಲ ಶೋಧಿಸಲು ಶುಕ್ರವಾರ ಮುಂದಾದ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಶಬ್ದ ಕೇಳಿ ಬಂದ ದಿಕ್ಕಿನ ಗ್ರಾಮಗಳ ಜನರನ್ನು ವಿಚಾರಣೆ ಮಾಡಿ, ಕೊನೆಗೂ ಶಬ್ದದ ಮೂಲವನ್ನು ಪತ್ತೆ ಹಚ್ಚಿದ್ದಾರೆ.

ಹೊಸಹಳ್ಳಿ ಗ್ರಾಮದ ರೈತ ಪುಟ್ಟರಾಜು ಮೂರು ಎಕರೆ ಜಮೀನನ್ನು ಸಮತಟ್ಟು ಮಾಡಲು ಅಡ್ಡಿಯಾಗಿದ್ದ ಹಿಡಕಲ್ಲಿನ ದಿಣ್ಣೆಯನ್ನು ತೆರವುಗೊಳಿಸಲು ಕಂಪ್ರೆಷರ್ ಯಂತ್ರದ ಮೂಲಕ 20ಕ್ಕೂ ಹೆಚ್ಚು ಕಡೆ ಕಲ್ಲುಗಳನ್ನು ಕೊರೆದು ಸ್ಫೋಟಕ ಬಳಸಿಕೊಂಡು ಸ್ಫೋಟಿಸಿದ್ದರು. ಹೀಗಾಗಿ, ತಾಲ್ಲೂಕಿನ ಹಲವೆಡೆ ಶಬ್ದ ಕೇಳಿ ಬಂದಿತ್ತು.

ADVERTISEMENT

ಕಲ್ಲು ಸ್ಫೋಟದಿಂದ ಭಾರಿ ಶಬ್ದ ಕೇಳಿ ಬಂದಿದ್ದರಿಂದ ಇನ್ನೂ 10ಕ್ಕೂ ಹೆಚ್ಚು ಕುಳಿಗಳನ್ನು ಸ್ಫೋಟಿಸದೆ ಹಾಗೆ ಬಿಟ್ಟಿರುವುದು ಕಂಡುಬಂದಿದೆ.

ತಹಶೀಲ್ದಾರ್ ಪ್ರಮೋದ್ ಎಲ್. ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಉದಯರವಿ, ಮೇಲುಕೋಟೆ ಪೊಲೀಸ್ ಇನ್‌ಸ್ಪೆಕ್ಟರ್ ಸುಮಾರಾಣಿ, ಸಬ್ ಇನ್‌ಸ್ಪೆಕ್ಟರ್ ಗಣೇಶ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.