
ಶ್ರೀರಂಗಪಟ್ಟಣ: ಪ್ರತಿ ಟನ್ ಕಬ್ಬಿಗೆ ₹6 ಸಾವಿರ ಬೆಲೆ ನಿಗದಿ ಸೇರಿ ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದು ಸಂಯುಕ್ತ ಕಿಸಾನ್ ಸಂಘಟನೆಯ ನಾಯಕ ಜಗಜಿತ್ಸಿಂಗ್ ದಲೈವಾಲ ಹೇಳಿದರು.
ಪಟ್ಟಣಕ್ಕೆ ಬುಧವಾರ ತಮ್ಮ ತಂಡದ ಜತೆ ಆಗಮಿಸಿದ ಅವರು ಸ್ಥಳೀಯ ರೈತ ಮುಖಂಡರ ಜತೆ ಒಂದು ತಾಸು ಚರ್ಚೆ ನಡೆಸಿದರು. ‘ಕೃಷಿ ಉತ್ಪನ್ನಗಳಿಗೆ ನೀಡುವ ಬೆಂಬಲ ಬೆಲೆ ಕಾನೂನುಬದ್ಧವಾಗಬೇಕು. 2013ರ ಭೂಸ್ವಾಧೀನ ಕಾಯ್ದೆ ಮರು ಜಾರಿಯಾಗಬೇಕು. ದೇಶದ ಎಲ್ಲ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಜಾಥಾ ನಡೆಸುತ್ತಿದ್ದೇವೆ. ಮಾರ್ಚ್ 17ರಂದು ದೆಹಲಿಯಲ್ಲಿ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲಿದ್ದೇವೆ’ ಎಂದು ತಿಳಿಸಿದರು.
ಮೈಸೂರು ಕಡೆಯಿಂದ ಪಟ್ಟಣಕ್ಕೆ ಬಂದ ದಲೈವಾಲ, ತಮಿಳುನಾಡಿನ ಪಾಂಡಿಯನ್, ಹರಿಯಾಣದ ಅಭಿಮಾನ್ ಕೂಗರ್, ಆಂಧ್ರಪ್ರದೇಶದ ವೆಂಕಟೇಶ್ವರರಾವ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬುಬೂರು ಶಾಂತಕುಮಾರ್ ಅವರನ್ನು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶಗೌಡ ನೇತೃತ್ವದಲ್ಲಿ ಸ್ವಾಗತಿಸಿ ತಾಲ್ಲೂಕಿನ ಪರವಾಗಿ ಮನವಿ ಸಲ್ಲಿಸಲಾಯಿತು.
ರೈತ ಮುಖಂಡರಾದ ನಾಗೇಂದ್ರಸ್ವಾಮಿ, ನೆಲಮನೆ ಪುಟ್ಟಸ್ವಾಮಿ, ನಿಂಗೇಗೌಡ, ಬಿ. ಎಸ್, ರಮೇಶ್, ಮೋಹನ್, ದಸಂಸ ಮುಖಂಡರಾದ ಗಂಜಾಂ ರವಿಚಂದ್ರ, ಮುಂಡುಗದೊರೆ ಮೋಹನ್, ಶ್ರೀಕಂಠಯ್ಯ, ತಮ್ಮಣ್ಣ, ಧನಂಜಯ, ರುಕ್ಮಾಂಗ, ದಿನೇಶ್, ಡಿ.ಎಂ. ಕೃಷ್ಣೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.