ADVERTISEMENT

ಸರ್ವ ಭಾಷಿಕರನ್ನೂ ಆಕರ್ಷಿಸುವ ಕನ್ನಡ: ಇತಿಹಾಸಕಾರ ಎಚ್.ಶ್ರೀಧರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:41 IST
Last Updated 19 ಜನವರಿ 2026, 5:41 IST
ಮಂಡ್ಯ ನಗರದ ಕರ್ನಾಟಕ ಸಂಘ ಆವರಣದ ಕೆ.ವಿ. ಶಂಕರಗೌಡ ಶಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ, 15ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು 
ಮಂಡ್ಯ ನಗರದ ಕರ್ನಾಟಕ ಸಂಘ ಆವರಣದ ಕೆ.ವಿ. ಶಂಕರಗೌಡ ಶಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ, 15ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು    

ಮಂಡ್ಯ: ‘ಕನ್ನಡ ಭಾಷೆಯು ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಚಾರಿತ್ರಿಕ ಭಾಷೆಯಾಗಿದೆ. ಕನ್ನಡ ಭಾಷೆಗೆ ಸರ್ವ ಭಾಷೆಗಳ ಜನರನ್ನು ಆಕರ್ಷಿಸುವ, ಸೆಳೆಯುವ ಅಯಸ್ಕಾಂತೀಯ ಗುಣವಿದೆ. ಅದು ಕನ್ನಡದ ಶಕ್ತಿ ಮತ್ತು ತಾಕತ್ತು’ ಎಂದು ಇತಿಹಾಸಕಾರ ಎಚ್.ಶ್ರೀಧರ ಅಭಿಪ್ರಾಯಪಟ್ಟರು. 

ನಗರದ ಕರ್ನಾಟಕ ಸಂಘ ಆವರಣದ ಕೆ.ವಿ. ಶಂಕರಗೌಡ ಶಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ, 15ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕನ್ನಡಕ್ಕೆ ಕನ್ನಡವೇ ಸಾಕ್ಷಿ. ಕನ್ನಡ ಭಾಷೆ ಕೇವಲ ಆಡು ಭಾಷೆಯಾಗಬಾರದು. ಅದು ಹಸಿವಿನ ಭಾಷೆ, ಉಸಿರಿನ ಭಾಷೆ, ಮನಸ್ಸಿನ ಭಾಷೆ, ಹೃದಯದ ಭಾಷೆ ಹಾಗೂ ಬದುಕಿನ ಭಾಷೆಯಾಗಬೇಕು. ಪ್ರತಿಯೊಬ್ಬ ಕನ್ನಡಿಗನು ತನ್ನ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ– ಬೆಳೆಸುವ ಗಟ್ಟಿ ಮನಸ್ಸು ಮಾಡಬೇಕು ಎಂದು ಹೇಳಿದರು.

ADVERTISEMENT

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ‘ಕರ್ನಾಟಕ ಸೇವಾ ಭೂಷಣ’, ‘ಕನ್ನಡ ರತ್ನ’ ಹಾಗೂ ‘ಕಾವ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಸಾಹಿತಿ ಡಾ.ಚಂದ್ರಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ವೇದಿಕೆಯ ಪದಾಧಿಕಾರಿಗಳಾದ ರಾಗಿಮುದ್ದನಹಳ್ಳಿ ನಾಗೇಶ್, ಮಂಗಲ ಶಿವಣ್ಣ, ರೂಪಾ ಹೊಸಹಳ್ಳಿ, ನೇತ್ರಾ ಉಪಸ್ಥಿತರಿದ್ದರು.

ಸಂಸ್ಕೃತಿ ಪರಂಪರೆ ಹೊಂದಿದ ಶಾಂತಿಯುತ ಭಾರತದಲ್ಲಿ ನಾವು ಬದುಕುತ್ತಿದ್ದೇವೆ. ಹಲವು ರಾಷ್ಟ್ರಗಳು ಅಹಿಂಸೆಯಿಂದ ತತ್ತರಿಸುತ್ತಿವೆ. ಆ ದೇಶಗಳಿಗೆ ನಮ್ಮ ಭಾರತವು ಮಾದರಿಯಾಗಲಿ
- ಡಾ.ಚಂದ್ರಶೇಖರ್ ವೈದ್ಯ ಸಾಹಿತಿ
‘ಎಳ್ಳು–ಬೆಲ್ಲ ತಿಂದು ಒಳ್ಳೆಯ ಮಾತಾಡಿ’
ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ ನಿಂಗರಾಜ್ ಗೌಡ ಮಾತನಾಡಿ ‘ಸಂಕ್ರಾಂತಿ ಎಂದರೆ ಶ್ರಮ ಸಂಸ್ಕೃತಿ ಸಹಭಾಗಿತ್ವದ ಸುಂದರ ಸಂಗಮವಾಗಿದ್ದು ಈ ಹಬ್ಬದಲ್ಲಿ ಎಳ್ಳು–ಬೆಲ್ಲದ ಸಿಹಿ ಕಬ್ಬಿನ ಮಧುರತೆ ಹೊಸ ಬೆಳೆಯ ಸಮೃದ್ಧಿ ಪ್ರತಿಯೊಬ್ಬರ ಜೀವನವನ್ನೂ ತುಂಬಬೇಕು’ ಎಂದು  ತಿಳಿಸಿದರು. ಎಳ್ಳು–ಬೆಲ್ಲ ಹಂಚಿಕೊಳ್ಳುವುದು ಗಾಳಿಪಟ ಹಾರಿಸುವುದು ಕಿಚ್ಚು ಹಾಯಿಸುವುದು ಬಂಧು–ಮಿತ್ರರ ಮನೆಗಳಿಗೆ ತೆರಳಿ ಶುಭಾಶಯ ಹೇಳಿಕೊಳ್ಳುವುದು ಸಂಕ್ರಾಂತಿ ಸಂಭ್ರಮದ ಭಾಗವಾಗಿದೆ. ‘ಎಳ್ಳು ಬೆಲ್ಲ ತಿನ್ನಿ ಒಳ್ಳೆ ಮಾತಾಡಿ’ ಎಂದು ಜನರು ಹೇಳುತ್ತಾರೆ. ಸಿಹಿಯಾದ ಈ ಮಿಶ್ರಣದಂತೆಯೇ ಸಂಬಂಧಗಳೂ ಸಿಹಿಯಾಗಲಿ ದ್ವೇಷಗಳು ದೂರವಾಗಿ ಸ್ನೇಹ–ಸೌಹಾರ್ದ ಹೆಚ್ಚಾಗಲಿ ಎಂಬುದು ಇದರ ಒಳಾರ್ಥವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.