ಮಂಡ್ಯ: ‘ಸ್ಯಾಂಟ್ರೊ ರವಿ ಬಂಧನಕ್ಕಾಗಿ ನಾನು ನಿಮಿಷಾಂಬಾ ದೇವಿಯಲ್ಲಿ ಹರಕೆ ಹೊತ್ತಿದ್ದೆ, ಆರೋಪಿಯನ್ನು ಬಂಧಿಸಲಾಗಿದ್ದು ಈಗ ಹರಕೆ ತೀರಿಸಲು ಬಂದಿದ್ದೇನೆ. 12 ವರ್ಷಗಳಿಂದ ನಾನು ದೇವಿಯನ್ನು ಅಪಾರವಾಗಿ ನಂಬುತ್ತೇನೆ’ ಎಂದು ಎಡಿಜಿಪಿ ಅಲೋಕ್ ಕುಮಾರ್ ಶನಿವಾರ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕು ಗಂಜಾಂನ ನಿಮಿಷಾಂಬಾ ದೇವಿ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಅವರು ಮಾತನಾಡಿದರು.
‘ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದ ಕಾರಣ ಆರೋಪಿ ಬಂಧನಕ್ಕೆ ಹೆಚ್ಚು ಒತ್ತಡವಿತ್ತು, ಪೊಲೀಸ್ ಇಲಾಖೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿತ್ತು. ನಾಲ್ಕು ದಿನಗಳ ಹಿಂದೆ ದೇವಾಲಯಕ್ಕೆ ಬಂದದ್ದ ನಾನು ‘ಅಪಪ್ರಚಾರ ಹೋಗಬೇಕು, ಆರೋಪಿ ಬೇಗ ಸಿಗಬೇಕು’ ಎಂದು ನಿಮಿಷಾಂಬಾ ದೇವಿಯಲ್ಲಿ ಬೇಡಿಕೊಂಡಿದ್ದೆ. ಆರೋಪಿ ಸಿಕ್ಕಿದ್ದು ದೇವಿಗೆ ಧನ್ಯವಾದ ಹೇಳಲು ಬಂದಿದ್ದೇನೆ’ ಎಂದರು.
‘2011ರಲ್ಲಿ ಹುಣಸೂರಿನಲ್ಲಿ ಜೋಡಿ ಕೊಲೆಯಾದಾಗ ನಾನು ಹರಕೆ ಮಾಡಿಕೊಂಡ 5 ತಾಸಿನಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದರು. ದೇವಾಲಯದಿಂದ ಮೈಸೂರು ತಲುಪುವಷ್ಟರಲ್ಲಿ ಆರೋಪಿಗಳ ಬಂಧನವಾಗಿತ್ತು. ನಿಮಿಷಾಂಬಾ ದೇವಿಯನ್ನು ಅಪಾರ ಜನ ನಂಬುತ್ತಾರೆ, ನಾನು ಕೂಡ ನಂಬಿಕೆ ಇಟ್ಟಕೊಂಡು ಆರಾಧಿಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.