ADVERTISEMENT

‘ಸರ್ವೋದಯ ಮೇಳ’ಕ್ಕೆ ಚಾಲನೆ: ಕಾವ್ಯಗಳಲ್ಲಿ ಗಾಂಧಿ ಅನಾವರಣ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:30 IST
Last Updated 11 ಫೆಬ್ರುವರಿ 2026, 7:30 IST
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಸಂಜೆ ಆರಂಭವಾದ ಗಾಂಧಿ ಪ್ರಣೀತ ವಿಚಾರಧಾರೆಗಳ ‘ಸರ್ವೋದಯ ಮೇಳ’ದಲ್ಲಿ ಗಾಂಧಿ ಕುರಿತ ಕಾವ್ಯಗಳನ್ನು ವಿಶ್ಲೇಷಣೆ ಮಾಡಿದ ಶಿಕ್ಷಣ ತಜ್ಞ ಎಚ್‌.ಎನ್‌. ಮುರಳೀಧರ್ ಅವರನ್ನು ಮೇಳದ ಸಂಯೋಜಕ ಹಾಗೂ ವೈದ್ಯ ಡಾ.ಬಿ.ಸುಜಯಕುಮಾರ್‌ ಅಭಿನಂದಿಸಿದರು
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಸಂಜೆ ಆರಂಭವಾದ ಗಾಂಧಿ ಪ್ರಣೀತ ವಿಚಾರಧಾರೆಗಳ ‘ಸರ್ವೋದಯ ಮೇಳ’ದಲ್ಲಿ ಗಾಂಧಿ ಕುರಿತ ಕಾವ್ಯಗಳನ್ನು ವಿಶ್ಲೇಷಣೆ ಮಾಡಿದ ಶಿಕ್ಷಣ ತಜ್ಞ ಎಚ್‌.ಎನ್‌. ಮುರಳೀಧರ್ ಅವರನ್ನು ಮೇಳದ ಸಂಯೋಜಕ ಹಾಗೂ ವೈದ್ಯ ಡಾ.ಬಿ.ಸುಜಯಕುಮಾರ್‌ ಅಭಿನಂದಿಸಿದರು   

ಶ್ರೀರಂಗಪಟ್ಟಣ: ಪಟ್ಟಣದ ಸುಬ್ರಹ್ಮಣ್ಯೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಆರಂಭವಾದ ಗಾಂಧಿ ವಿಚಾರ ಪ್ರಣೀತ ‘ಸರ್ವೋದಯ ಮೇಳ’ದಲ್ಲಿ ಮಹಾತ್ಮ ಗಾಂಧಿ ಕುರಿತು ಮೇರು ಕವಿಗಳು ಬರೆದಿರುವ ಕಾವ್ಯಗಳ ವಿಶ್ಲೇಷಣೆ ನಡೆಯಿತು.

ಶಿಕ್ಷಣ ತಜ್ಞ ಎಚ್‌.ಎನ್. ಮುರಳೀಧರ್ ಅವರು, ದ.ರಾ. ಬೇಂದ್ರೆ ಬರೆದಿರುವ ‘ಮರಣ’, ಗೋಪಾಲಕೃಷ್ಣ ಅಡಿಗರ ‘ಗಾಂಧಿ’, ಸಿಂಪಿ ಲಿಂಗಣ್ಣ ಅವರ ‘ಬಹುರೂಪಿ’, ವೀ. ಸೀತಾರಾಮಯ್ಯ ಅವರ ‘ಮಹಾತ್ಮ’, ಪುತಿನ ಅವರ ‘ನೆರಳು’, ಸವಿತಾ ನಾಗಭೂಷಣ ಅವರ ‘ಗಾಂಧಿ ಹುಟ್ಟಿದ್ದು’, ಟಿ.ಪಿ. ಕೈಲಾಸಂ ಅವರ ‘ನಮ್ಮ ಬಾಪೂ’, ಇತರ ಕವನಗಳನ್ನು ವಿಶ್ಲೇಷಣೆ ಮಾಡಿದರು. ವಿದ್ಯಾರ್ಥಿಗಳು ವಾಚಿಸಿದ ಕವಿತೆಗಳ ಸಾರವನ್ನು ಮುರಳೀಧರ್‌ ಎಳೆ ಎಳೆಯಾಗಿ ಬಿಡಿಸಿಟ್ಟರು.

‘ಗಾಂಧಿ ಎಂಬುದು ಧೀಶಕ್ತಿ. ಎಲ್ಲ ಕಾಲಕ್ಕೂ, ಎಲ್ಲ ದೇಶಗಳಿಗೂ ಸಲ್ಲುವ ವ್ಯಕ್ತಿತ್ವ. ಸತ್ಯದ ಹುಡುಕಾಟದಲ್ಲಿ ತಮ್ಮನ್ನು ತಾವು ಸ್ವಯಂ ವಿಮರ್ಶೆಗೆ ಒಳಪಡಿಸಿಕೊಂಡ ಅಪರೂಪದ ಮತ್ತು ಅಪ್ಪಟ ಮನುಷ್ಯ’ ಎಂದು ಮುರಳೀಧರ್ ಬಣ್ಣಿಸಿದರು.

ADVERTISEMENT

ಸರ್ವೋದಯ ಮೇಳದ ಸಂಚಾಲಕ ಡಾ.ಬಿ. ಸಜಯಕುಮಾರ್‌, ‘1948ರಿಂದ ನಡೆಯುತ್ತಿರುವ ಸರ್ವೋದಯ ಮೇಳದಲ್ಲಿ ರಾಜ್ಯ, ಹೊರ ರಾಜ್ಯಗಳ ಗಣ್ಯಾತಿ ಗಣ್ಯರು ಪಾಲ್ಗೊಂಡು ಗಾಂಧಿ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಪ್ರಚಲಿತ ವಿದ್ಯಮಾನಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ’ ಎಂದರು. ಆಶ್ರಮ ಪ್ರಾರ್ಥನೆ ನಡೆಯಿತು.

ಗಾಂಧಿ ಅನುಯಾಯಿಗಳಾದ ಶಿವರಾಜ್‌, ಸಂತೋಷ್ ಕೌಲಗಿ, ಎಂ.ಸಿ. ನರೇಂದ್ರ, ಪ್ರೊ. ಬೋರೇಗೌಡ ಚಿಕ್ಕಮರಳಿ, ಕ್ಯಾತನಹಳ್ಳಿ ಚಂದ್ರಣ್ಣ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌. ಕೆಂಪೂಗೌಡ, ಪ್ರೊ.ಜಿ. ಉಷಾರಾಣಿ, ಕುಂತಿಬೆಟ್ಟ ಚಂದ್ರಶೇಖರಯ್ಯ, ಹಾರೋಹಳ್ಳಿ ಧನ್ಯಕುಮಾರ್‌, ಕೆ.ಶೆಟ್ಟಹಳ್ಳಿ ಅಪ್ಪಾಜಿ. ಎಸ್‌.ಎಂ. ಶಿವಕುಮಾರ್‌, ಗಂಜಾಂ ಕೃಷ್ಣ, ಕೆ.ಟಿ. ರಂಗಯ್ಯ, ಇಲ್ಯಾಸ್ ಅಹಮದ್‌ಖಾನ್‌, ಡಿ. ಕುಮಾರ್‌, ಮ್ಯಾನ್‌ ಸಂಸ್ಥೆಯ ಮನು, ಕೆ.ಎಸ್‌. ಜಯಶಂಕರ್‌, ಸ. ಸ್ವಾಮಿಗೌಡ, ಜೆ.ಬಿ. ಮಂಜುನಾಥ್ ಪಾಲ್ಗೊಂಡಿದ್ದರು.

ಮೇಳದಲ್ಲಿ ಇಂದು: ಬೆಳಿಗ್ಗೆ 10 ಗಂಟೆಗೆ ಅಂಕಣಕಾರ ಅರವಿಂದ ಚೊಕ್ಕಾಡಿ ‘ಗಾಂಧೀಜಿ ಅವರ ತತ್ವಗಳಲ್ಲಿ ಸರ್ವೋದಯ ಸಾಧ್ಯತೆಗಳು’ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಸರ್ವಧರ್ಮ ಪ್ರಾರ್ಥನೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.