ADVERTISEMENT

ಮಂಡ್ಯ | ಬಾಲಕಿ ಮೇಲೆ ಸಾಮೂಹಿಕ‌ ಅತ್ಯಾಚಾರ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 10:44 IST
Last Updated 10 ನವೆಂಬರ್ 2023, 10:44 IST
<div class="paragraphs"><p>ಬಾಲಕಿ ಅತ್ಯಾಚಾರ (ಸಾಂಕೇತಿಕ ಚಿತ್ರ)</p></div>

ಬಾಲಕಿ ಅತ್ಯಾಚಾರ (ಸಾಂಕೇತಿಕ ಚಿತ್ರ)

   

ಮಂಡ್ಯ: ಬಾಲಕಿ ಮೇಲೆ‌ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಮದ್ದೂರು ಠಾಣೆ ಪೊಲೀಸರು ಮೂವರು ಯುವಕರನ್ನು ಶುಕ್ರವಾರ ಬಂಧಿಸಿದ್ದಾರೆ.

ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ‌ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಹಾಗೂ ಬಾಲಕಿ ಮೈಸೂರಿನ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ‌ ಓದುತ್ತಿದ್ದರು. ಆರೋಪಿಯು ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ. ಈಚೆಗೆ‌ ಮೈಸೂರಿನಲ್ಲಿ ನಡೆದ ಯುವ ದಸರಾ ಸೇರಿದಂತೆ ವಿವಿಧೆದೆ ಇಬ್ಬರೂ ಜೊತೆಯಲ್ಲಿ ತೆರಳಿದ್ದರು.

ADVERTISEMENT

ನ.4ರಂದು ಮದ್ದೂರಿಗೆ ಬಾಲಕಿಯನ್ನು ಕರೆಸಿಕೊಂಡಿದ್ದ ಆರೋಪಿ ಬೆಂಗಳೂರು- ಮೈಸೂರು ಹೆದ್ದಾರಿ ಬದಿಯ ಲಾಡ್ಜ್ ಗೆ ಕರೆದೊಯ್ದಿದ್ದ. ನಂತರ ಆತ ಬಾಲಕಿ ಮೇಲೆ‌ ಅತ್ಯಾಚಾರ ಎಸಗಿದ್ದ. ಖಾಸಗಿ ಕ್ಷಣಗಳ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದ.

ನಂತರ‌ ತನ್ನ ಇಬ್ಬರು ಗೆಳೆಯರನ್ನು ಲಾಡ್ಜ್ ಗೆ ಕರೆಸಿ ಅವರ ಜೊತೆಯೂ ಸಹಕರಿಸುವಂತೆ ಬಾಲಕಿಯನ್ನು ಪೀಡಿಸಿದ್ದ.‌ ಸಹಕರಿಸದಿದ್ದರೆ ಜಾಲತಾಣಗಳಲ್ಲಿ ವಿಡಿಯೊ ಹರಿಬಿಡುವುದಾಗಿ ಬೆದರಿಸಿದ್ದ. ನಂತರ ಮೂವರೂ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು, ಎಲ್ಲವನ್ನೂ ಚಿತ್ರೀಕರಣ ಮಾಡಿಕೊಂಡಿದ್ದರು.

ಘಟನೆ ಕುರಿತು ಯಾರಿಗಾದರೂ ವಿಷಯ ತಿಳಿಸಿದರೆ ಎಲ್ಲಾ ವಿಡಿಯೊ ಬಿಡುವುದಾಗಿ ಆರೋಪಿಗಳೆಲ್ಲರೂ ಬೆದರಿಕೆ ಹಾಕಿದ್ದರು. ಜೊತೆಗೆ ಕರೆದಾಗಲೆಲ್ಲಾ ಬರಬೇಕು ಎಂದೂ ತಾಕೀತು ಮಾಡಿದ್ದರು.

ಆರೋಪಿಗಳು ಮತ್ತೆ ಮತ್ತೆ ಕರೆ ಮಾಡಿ ಬೆದರಿಸುತ್ತಿದ್ದ ಕಾರಣ ಬಾಲಕಿ ಘಟನೆ‌ ಕುರಿತು ತನ್ನ ತಾಯಿ ಬಳಿ ಹೇಳಿಕೊಂಡಿದ್ದರು. ತಾಯಿ‌ ಮದ್ದೂರು ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ, ಜಾತಿ ನಿಂದನೆ, ಕೊಲೆ ಬೆದರಿಕೆಯ ದೂರು ದಾಖಲಿಸಿದ್ದರು.

'ಆರೋಪಿಗಳೆಲ್ಲರೂ ಬಾಲಕಿಯ ಅಕ್ಕಪಕ್ಕದ ಗ್ರಾಮದವರೇ ಆಗಿದ್ದಾರೆ. ಬಾಲಕಿಯನ್ನು ಕರೆದೊಯದ್ದಿದ್ದ ಪ್ರಮುಖ ಆರೋಪಿ ಹಾಗೂ ಆತನ ಗೆಳೆಯ ಬಾಲಕರಾಗಿದ್ದು ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಮತ್ತೊಬ್ಬ ಆರೋಪಿ ಪ್ರಾಪ್ತ ವಯಸ್ಕನಾಗಿದ್ದು ಜೈಲಿಗೆ ಕಳುಹಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.

ಕ್ಷಮೆ ನೀಡಬೇಡಿ: ದಲಿತ ಸಂಘಟನೆಗಳ ಒತ್ತಾಯ

ಘಟನೆಯ ನಂತರ ದಲಿತ ಸಂಘಟನೆಗಳ ಮುಖಂಡರು ಮದ್ದೂರು ಪೊಲೀಸ್‌ ಠಾಣೆಯ ಎದುರು ಸೇರಿದರು. ‘ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಬ್ಬರು ಆರೋಪಿಗಳು ಅಪ್ರಾ‍ಪ್ತ ವಯಸ್ಕರಾಗಿದ್ದರೂ ಅವರಿಗೆ ಕ್ಷಮೆ ನೀಡಬಾರದು’ ಎಂದು ಒತ್ತಾಯಿಸಿದರು.

‘ಪೊಲೀಸರ ಕರ್ತವ್ಯ ಶ್ಲಾಘನೀಯವಾದುದು, ದೂರು ಬಂದ ಕೂಡಲೇ ಆರೋಪಿಗಳನ್ನು ಬಂಧಿಸಿ ದಿಟ್ಟ ಕ್ರಮ ಮೆರೆದಿದ್ದಾರೆ. ಆದರೆ ಅವರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು’ ಎಂದರು.

‘ಮದ್ದೂರಿನ ಲಾಡ್ಜ್‌ ಮಾಲೀಕರು ಅಪ್ತಾಪ್ತ ವಯಸ್ಕರಿಗೆ ಕೊಠಡಿ ನೀಡಿರುವುದು ಅಕ್ಷಮ್ಯ ಅಪರಾಧ. ಅತ್ಯಾಚಾರಕ್ಕೆ ಪರೋಕ್ಷವಾಗಿ ಅವರೂ ಕಾರಣಕರ್ತರಾಗಿದ್ದಾರೆ. ಕೂಡಲೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಲಾಡ್ಜ್‌ ಮಾಲೀಕರನ್ನು ಬಂಧಿಸಬೇಕು. ಕೂಡಲೇ ಲಾಡ್ಜ್‌ ಮುಚ್ಚಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.