ADVERTISEMENT

ನಾಗಮಂಗಲ: ಆದಿಚುಂಚನಗಿರಿ ಜಾತ್ರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 10 ಜೋಡಿಗಳು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 15:38 IST
Last Updated 27 ಫೆಬ್ರುವರಿ 2026, 15:38 IST
   

ನಾಗಮಂಗಲ: ‘ಮನಸ್ಸುಗಳ ಬೆಸುಗೆಯನ್ನು ಸಾಕ್ಷೀಕರಿಸುವ ಮಾಂಗಲ್ಯ ಧಾರಣೆಯೊಂದಿಗೆ ಕಾಲಿಡುವ ದಾಂಪತ್ಯ ಜೀವನದಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮವಿರಲಿ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ನವ ಜೋಡಿಗಳಿಗೆ ಶುಭ ಹಾರೈಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಬಿಜಿಎಸ್ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 10 ಜೋಡಿಗಳ ಸರಳ ವಿವಾಹ ಹಾಗೂ ಹಿರಿಯ ದಂಪತಿಗಳಿಗೆ ಗೌರವ ಸಮರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಗೃಹಸ್ಥಾಶ್ರಮ ಬಹಳ ಗಟ್ಟಿಯಾಗಿರುವ ನೆಲದಲ್ಲಿ ಮಾತ್ರ ಸಂಸ್ಕಾರ, ಸಂಸ್ಕೃತಿಯೂ ಕೂಡ ಭದ್ರವಾಗಿರುತ್ತದೆ. ಶ್ರೀಕ್ಷೇತ್ರದಲ್ಲಿ ವರ್ಷವಿಡೀ ಸರಳ ವಿವಾಹ ಮಹೋತ್ಸವ ನಡೆಯುತ್ತಿದ್ದರೂ ಭೈರವೈಕ್ಯ ಶ್ರೀಗಳ ಸಂಕಲ್ಪದಂತೆ ಜಾತ್ರಾ ಮಹೋತ್ಸವದಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದರು.

ADVERTISEMENT

ಬೆಳಿಗ್ಗೆಯಿಂದಲೇ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಹೋಮ-ಹವನಾದಿ ಪೂಜಾ ಕೈಂಕರ್ಯಗಳು ಜರುಗಿದವು. ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಹಿನ್ನೆಲೆಯಲ್ಲಿ ಶ್ರೀಮಠ ಸೇರಿದಂತೆ ಬಿಜಿಎಸ್ ಸಭಾ ಭವನವನ್ನು ವಿದ್ಯುತ್ ದೀಪಾಲಂಕಾರ ಮತ್ತು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ವಧು-ವರರಿಗೆ ಮಂತ್ರಾಕ್ಷತೆ ಹಾಕಿ ಫಲ ತಾಂಬೂಲ ನೀಡಿ ಶ್ರೀಗಳು ಹರಸಿದರು. ಹೆಣ್ಣಿಗೆ ಸೀರೆ, ರವಿಕೆ, ತಾಳಿ, ಕಾಲುಂಗುರ ಹಾಗೂ ಮುತ್ತೈದೆಯರಿಗೆ ಸಲ್ಲುವ ಬಾಗಿನ ನೀಡಲಾಯಿತು. ಗಂಡಿಗೆ ಪೇಟ, ಪಂಚೆ, ಶರ್ಟ್ ವಿತರಿಸಿದರು.

ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ, ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಪಾಂಡವಪುರದ ಪುಸ್ತಕಮನೆಯ ಎಂ. ಅಂಕೇಗೌಡ, ಇತಿಹಾಸ ತಜ್ಞ ಪ್ರೊ.ಕೆ. ಪುಟ್ಟರಂಗಪ್ಪ ಮುಂತಾದ ಗಣ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.

ಹಿರಿಯ ದಂಪತಿಗೆ ಸನ್ಮಾನ

ವಿವಾಹವಾಗಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ದಂಪತಿಗಳನ್ನು ನಿರ್ಮಲಾನಂದನಾಥ ಸ್ವಾಮೀಜಿ ಅವರು ಮೈಸೂರು ಪೇಟ, ಶಾಲು ಹಾಕಿ ಸನ್ಮಾನಿಸಿದರು. ಮಂಡ್ಯ, ಹಾಸನ, ಮೈಸೂರು, ರಾಮನಗರ ಹಾಗೂ ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ 260 ಹಿರಿಯ ದಂಪತಿಗಳು ಆಗಮಿಸಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.