
ಶ್ರೀರಂಗಪಟ್ಟಣ: ತಾಲ್ಲೂಕು ಪಾಲಹಳ್ಳಿ ಬಳಿ, ಶ್ರೀರಂಗಪಟ್ಟಣ– ಕೆಆರ್ಎಸ್ ಸಂಪರ್ಕ ರಸ್ತೆಗೆ ಹೊಂದಿಕೊಂಡಿರುವ ಜಾಗಕ್ಕೆ ತಂತಿ ಬೇಲಿ ನಿರ್ಮಿಸಲಾಗುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪಾಲಹಳ್ಳಿ ಮತ್ತು ಹೊಸಹಳ್ಳಿ ಗ್ರಾಮಗಳ ಮಧ್ಯೆ, ತಿರುವು ಇರುವ ಕಡೆ ತಂತಿ ಬೇಲಿ ನಿರ್ಮಿಸಲು ಸೋಮವಾರ ಸಿಮೆಂಟ್ ಕಂಬಗಳನ್ನು ನೆಡಲಾಗುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಬೇಲಿ ನಿರ್ಮಾಣ ಕಾಮಗಾರಿಗೆ ತಡೆ ಒಡ್ಡಿದರು. ಜಮೀನು ಮಾಲೀಕರ ಕಡೆಯವರನ್ನು ತರಾಟೆಗೆ ತೆಗೆದುಕೊಂಡರು. ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರೇಗೌಡ, ಮುಖಂಡರಾದ ನಾಗರಾಜು, ಸಂಜೀವಮೂರ್ತಿ, ನಾರಾಯಣ, ಸ್ವಾಮಣ್ಣ, ರಮೇಶ ಕೆಲಸ ಮುಂದುವರಿಸದಂತೆ ಕೆಲಸಗಾರರಿಗೆ ಎಚ್ಚರಿಸಿದರು.
‘ಸ್ಥಳೀಯ ರೈತರಿಂದ ಜಮೀನು ಖರೀದಿಸಿರುವ ಬೆಂಗಳೂರಿನ ವ್ಯಕ್ತಿಯೊಬ್ಬರು ಶ್ರೀರಂಗಪಟ್ಟಣದಿಂದ ಕೆಆರ್ಎಸ್, ಮೈಸೂರು ಮತ್ತು ಹುಣಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೇವಲ ಆರೇಳು ಅಡಿ ಅಂತರದಲ್ಲಿ ಕಂಬಗಳನ್ನು ನೆಟ್ಟು ತಂತಿ ಬೇಲಿ ನಿರ್ಮಿಸಲು ಮುಂದಾಗಿದ್ದಾರೆ. ಈ ಸ್ಥಳದಲ್ಲಿ ತೀವ್ರ ತಿರುವು ಇರುವುದರಿಂದ ಸಾಕಷ್ಟು ಅಪಘಾತಗಳು ನಡೆಯುತ್ತಿವೆ. ಬೇಲಿ ನಿರ್ಮಿಸಿದರೆ ಅಪಘಾತಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಜಮೀನು ಖರೀದಿಸಿರುವವರು ತಮ್ಮ ವ್ಯಾಪ್ತಿ ಮೀರಿ ಬೇಲಿ ನಿರ್ಮಿಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭಾಗಶಃ ಬೇಲಿ ನಿರ್ಮಿಸಿದ್ದು ಅದನ್ನು ತೆರವು ಮಾಡಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಎಇಇ ಜಸ್ವಂತ್ ಬೇಲಿ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದರು. ಸಂಬಂಧಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ವಾಹನಗಳ ಸಂಚಾರಕ್ಕೆ ತೊಡಕಾಗುವಂತೆ ರಸ್ತೆ ಪಕ್ಕದಲ್ಲಿ ಬೇಲಿ ನಿರ್ಮಿಸಲಾಗುತ್ತಿದೆ. ರಸ್ತೆಗೆ ಹೊಂದಿಕೊಂಡಿರುವ ಜಾಗದಲ್ಲಿ ಬೇಲಿ ನಿರ್ಮಿಸುತ್ತಿರುವುದು ಸರಿಯಲ್ಲಜಸ್ವಂತ್ ಲೋಕೋಪಯೋಗಿ ಇಲಾಖೆ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.