ಮಂಡ್ಯ: ಕೆ.ಆರ್.ಎಸ್. ಅಣೆಕಟ್ಟೆಯಿಂದ ಬೆಳೆಗಳಿಗೆ ಜ.10ರಿಂದ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಕೆ.ಆರ್.ಎಸ್.ನಲ್ಲಿ ಮಂಗಳವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಜ.10ರಿಂದ 18 ದಿನ ನೀರು ಹರಿಸಲಾಗುವುದು. 12 ದಿನ ನೀರು ನಿಲುಗಡೆ ಮಾಡಲಾಗುವುದು. ಇದೇ ರೀತಿ ನಾಲ್ಕು ಬಾರಿ ನೀರು ನೀಡಲಾಗುವುದು ಎಂದರು.
ಜಿಲ್ಲೆಯ ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ಕೊನೆಯ ಭಾಗಕ್ಕೂ ನೀರು ಹರಿಸಲಾಗುವುದು. ರೈತರು ಅಲ್ಪಾವಧಿ ಬೆಳೆಗಳ ನಾಟಿ ಕೆಲಸವನ್ನು ಪ್ರಾರಂಭಿಸಬೇಕು. ಕೃಷಿ ಹಾಗೂ ನೀರಾವರಿ ಇಲಾಖೆ ಸಹಕಾರದೊಂದಿಗೆ ರೈತರು ಎರಡು ಬೆಳೆಗಳನ್ನು ಬೆಳೆಯಬೇಕು. ಇಲಾಖೆಗಳು ನೀಡುವ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಿ ಎಂದರು.
ಕೃಷ್ಣರಾಜ ಸಾಗರ ಜಲಾಶಯದ 92 ವರ್ಷಗಳ ಇತಿಹಾಸದಲ್ಲಿ ಒಂದು ವರ್ಷದಲ್ಲಿ 156 ದಿನ ಕೆ.ಆರ್.ಎಸ್. ಅಣೆಕಟ್ಟು ಭರ್ತಿಯಾಗಿರುವುದು (124.48 ಅಡಿ) ಇದೇ ಮೊದಲು. ಸಿಎಂ ಕಾಲ್ಗುಣ ಸರಿ ಇಲ್ಲ ಎಂದು ಟೀಕೆ ಟಿಪ್ಪಣಿ ಮಾಡುವವರಿಗೆ ಇದು ಉತ್ತರವಾಗಿದೆ. ಹಿಂದಿನ ವರ್ಷ ಜುಲೈ ತಿಂಗಳಿಂದ ಡಿಸೆಂಬರ್ ತಿಂಗಳವರೆಗೆ ನಮ್ಮ ರೈತರಿಗೆ ನಿರಂತರವಾಗಿ ನೀರು ನೀಡಲಾಗಿದೆ. ತಮಿಳುನಾಡಿಗೆ ಈ ಬಾರಿ ಹೆಚ್ಚುವರಿ ನೀರನ್ನೇ ಬಿಟ್ಟಿದ್ದೇವೆ ಎಂದರು.
ಸಭೆಯಲ್ಲಿ ವಿಧಾನಸಭಾ ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣಯ್ಯ, ಪಿ.ರವಿಕುಮಾರ್, ಕೆ.ಎಂ. ಉದಯ , ವಿಧಾನ ಪರಿಷತ್ ಸದಸ್ಯರಾದ ಮಧು ಜಿ. ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.