
ಮಂಡ್ಯ: ‘ಗಾಂಧಿ ಹಾಗೂ ಅಂಬೇಡ್ಕರ್ ಜಯಂತಿಯಂದು ಮಾಂಸಾಹಾರ ನಿಷೇಧಿಸುವುದು ಏಕೆ? ಜಯಂತಿಗಳಿಗೂ ನಮ್ಮ ಆಹಾರದ ಹಕ್ಕಿಗೂ ಏನು ಸಂಬಂಧ? ನಿಷೇಧಿಸಲು ಇವರು ಯಾರು’ ಎಂದು ಅಂಕಣಕಾರ ಶಿವಸುಂದರ್ ಪ್ರಶ್ನಿಸಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ‘ಬಾಡೂಟ ಬಳಗ’ ವತಿಯಿಂದ ‘ಬಾಡೂಟ ಹೋರಾಟಕ್ಕೆ ಒಂದು ವರ್ಷ’ದ ಅಂಗವಾಗಿ ಮಂಗಳವಾರ ನಡೆದ ‘ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಮುನ್ನುಡಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹನೀಯರ ಜಯಂತಿಗಳಲ್ಲಿ ಮಾಂಸಾಹಾರ ತಿನ್ನುಬಾರದು ಎಂದು ಸರ್ಕಾರ ಆದೇಶಿಸುತ್ತದೆ. ದೇಶದ ಇತಿಹಾಸದಲ್ಲಿ ಶ್ರಮಣ ಸಂಸ್ಕೃತಿಗೂ ಬ್ರಾಹ್ಮಣ್ಯ ಸಂಸ್ಕೃತಿಗೂ ನಡೆದಿರುವ ದೊಡ್ಡ ಯುದ್ಧವೇ ಇತಿಹಾಸ ಎಂದು ಅಂಬೇಡ್ಕರ್ ಹೇಳಿರುವ ಮಾತನ್ನು ನೆನಪಿಸಿಕೊಳ್ಳಬೇಕು. ಯಾವುದೇ ಕಾರ್ಯಕ್ರಮವಿರಲಿ, ಸಸ್ಯಾಹಾರ, ಮಾಂಸಾಹಾರವೆರಡೂ ಇರಬೇಕು’ ಎಂದರು.
‘ಪ್ರಜಾವಾಣಿ– ಅಭಿಮತ’ ಸಂಪಾದಕ ರಘುನಾಥ ಚ.ಹ. ಮಾತನಾಡಿ, ‘ಮೊಟ್ಟೆ ಎನ್ನುವ ಹೋರಾಟ ಸಮ್ಮೇಳನಕ್ಕಷ್ಟೇ ಮೀಸಲಾಗುವುದು ಬೇಡ. ಮಾಂಸಹಾರ ತಿನ್ನುವುವವರು ಅಪವಿತ್ರರು ಎಂದೂ ಬಿಂಬಿಸಬಾರದು’ ಎಂದರು.
‘ಕೇರಳದಲ್ಲಿ ‘ಬೀಫ್’ ಎಂಬ ಹೆಸರಿದ್ದ ಕಾರಣಕ್ಕೇ ಸಿನಿಮಾವನ್ನು ನಿಷೇಧಿಸಲಾಯಿತು. ಆದರೆ ಸಿನಿಮಾದಲ್ಲಿ ಬೀಫ್ ಬಗ್ಗೆ ಏನೂ ಹೇಳಿರಲಿಲ್ಲ’ ಎಂದು ವಿಷಾದಿಸಿದರು.
ಲೇಖಕರಾದ ಸಂತೋಷ್ ಗುಡ್ಡಿಯಂಗಡಿ, ಗುರುಪ್ರಸಾದ್ ಕಂಟಲಗೆರೆ, ಉ್ರಗನರಸಿಂಹೇಗೌಡ, ಲೋಕೇಶ್ ಮೊಸಳೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.