ಶ್ರೀರಂಗಪಟ್ಟಣ: ‘ಟಿಪ್ಪು ಮಸೀದಿ ಆವರಣದಲ್ಲಿರುವ ಹಿಂದೂಗಳ ಪವಿತ್ರ ತೀರ್ಥ ಕೊಳದ ದರ್ಶನಕ್ಕೆ ಮಂಡ್ಯ ಜಿಲ್ಲಾಡಳಿತ ಅವಕಾಶ ನೀಡಬೇಕು. ಇಲ್ಲದಿದ್ದರೆ 6–7 ಲಕ್ಷ ಹನುಮ ಮಾಲಾಧಾರಿಗಳ ಜೊತೆಗೂಡಿ ಬೆಂಗಳೂರಿನಿಂದ ಶ್ರೀರಂಗಪಟ್ಟಣದವರೆಗೆ ಪಾದಯಾತ್ರೆ ನಡೆಸಲಾಗುವುದು’ ಎಂದು ಕಾಳಿ ಮಠದ ಋಷಿ ಕುಮಾರ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಭಾನುವಾರ ಪಶ್ಚಿಮವಾಹಿನಿಗೆ ಭೇಟಿ ನೀಡಿ ಮಾತನಾಡಿದ ಅವರು ‘ಆಂಜನೇಯನ ದೇವಾಲಯ ಒಡೆದು ಜಾಮಿಯಾ ಮಸೀದಿ ನಿರ್ಮಿಸಿರುವುದಕ್ಕೆ ಸಾಕಷ್ಟು ಕುರುಹುಗಳಿವೆ. ಅಲ್ಲಿ ಆಂಜನೇಯನ ಪೂಜೆಗೆ ಅವಕಾಶ ನೀಡಬೇಕು. ಮಸೀದಿ ಆವರಣದಲ್ಲಿ ಕೊಳದಲ್ಲಿ ಸ್ನಾನ ಮಾಡಿದರೆ, ತೀರ್ಥ ಸೇವನೆ ಮಾಡಿದರೆ ರೋಗರುಜಿನಗಳು ವಾಸಿಯಾಗುತ್ತವೆ. ಈ ಬಗ್ಗೆ ದಾಖಲೆಗಳಿದ್ದು ಮಂಡ್ಯ ಜಿಲ್ಲಾಧಿಕಾರಿಗಳು ತೀರ್ಥ ಸೇವನೆಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
‘ಹನುಮ ಜಯಂತಿಯ ದಿನ ಕೊಳದಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ. ಹನುಮ ಮಾಲಾಧಾರಿಗಳು ಅಲ್ಲಿ ಸ್ನಾನ ಮಾಡಿ ಧ್ಯಾನ ಮಾಡಲು, ಪೂಜೆ ಸಲ್ಲಿಸಲು ಕೂಡಲೇ ಅವಕಾಶ ನೀಡಬೇಕು. ಅವಕಾಶ ನೀಡದಿದ್ದರೆ ಕಲ್ಯಾಣಿ ದರ್ಶನದ ಹೆಸರಿನಲ್ಲಿ ಶ್ರೀರಂಗಪಟ್ಟಣದವರೆಗೂ ಪಾದಯಾತ್ರೆ ನಡೆಸಲಾಗುವುದು’ ಎಂದರು.
3 ದಿನಗಳ ಹಿಂದಷ್ಟೇ ನರೇಂದ್ರಮೋದಿ ವಿಚಾರ ಮಂಚ್ ಪದಾಧಿಕಾರಿಗಳು ಜಾಮೀಯಾ ಮಸೀದಿ ಆವರಣದಲ್ಲಿ ಆಂಜನೇಯನ ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರಿಗೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.