ADVERTISEMENT

Womens Day: ಮಹಿಳಾ ಸಾಧಕಿ ಸಾಲಿನಲ್ಲಿ ಸಾಹಿತಿ ಮಲ್ಲಿಕಾ ಮಳವಳ್ಳಿ

ಟಿ.ಕೆ.ಲಿಂಗರಾಜು
Published 8 ಮಾರ್ಚ್ 2024, 7:21 IST
Last Updated 8 ಮಾರ್ಚ್ 2024, 7:21 IST
ಮಳವಳ್ಳಿ ಪಟ್ಟಣದ ಸಾಹಿತಿ ಮಲ್ಲಿಕಾ ಮಳವಳ್ಳಿ ಅವರನ್ನು ಸುತ್ತೂರಿನಲ್ಲಿ ನಡೆದ ಜಯಂತಿ ಮಹೋತ್ಸವದಲ್ಲಿ ಅಂದಿನ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಅವರಿಂದ ಅಭಿನಂದನೆ ಸ್ವೀಕರಿಸುತ್ತಿರುವುದು.
ಮಳವಳ್ಳಿ ಪಟ್ಟಣದ ಸಾಹಿತಿ ಮಲ್ಲಿಕಾ ಮಳವಳ್ಳಿ ಅವರನ್ನು ಸುತ್ತೂರಿನಲ್ಲಿ ನಡೆದ ಜಯಂತಿ ಮಹೋತ್ಸವದಲ್ಲಿ ಅಂದಿನ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಅವರಿಂದ ಅಭಿನಂದನೆ ಸ್ವೀಕರಿಸುತ್ತಿರುವುದು.   

ಮಳವಳ್ಳಿ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಸಾಹಿತ್ಯದ ಲೋಕದಲ್ಲಿ ಆಸಕ್ತಿ ಬೆಳೆಸಿಕೊಂಡು, 75 ವರ್ಷ ಪೂರೈಸಿದ ಲೇಖಕಿ ಮಲ್ಲಿಕಾ ಮಹದೇವಪ್ಪ  ಹಲವಾರು ಪುಸ್ತಕಗಳನ್ನು ಬರೆಯುವುದರ ಮೂಲಕ ಓದುವ ಅಭಿರುಚಿಯನ್ನು ಪಸರಿಸಿ ಮಹಿಳಾ ಸಾಧಕಿಯ ಸಾಲಿನಲ್ಲಿ ನಿಂತಿದ್ದಾರೆ.

ಸಾಹಿತ್ಯದ ಬಗ್ಗೆ ಸಾಕಷ್ಟು ಅಭಿರುಚಿ ಹೊಂದಿರುವ ಅವರು ಆಧುನಿಕ ವಚನಗಳು, ಮಹದೇಶ್ವರ ಭಕ್ತಿಗೀತೆ, ಮನೆಯಂಗಳ, ವಚನಜ್ಯೋತಿ, ಬಸವ ಸ್ಮರಣೆ, ಶ್ರೀ ಸಿದ್ದಗಂಗಾ ಶಿವಯೋಗಿ, ಹೃದಯಗೀತೆ ಸೇರಿದಂತೆ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಜೊತೆಗೆ ಕವನ ಸಂಕಲನ, ಕಾದಂಬರಿಗಳಲ್ಲಿ ಬೆಳಕು ಚೆಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

2023ರ ಡಿಸೆಂಬರ್ ನಲ್ಲಿ ಕ್ಯಾತಾಹಿನಿ ಎಂಬ ಕಾಂದಂಬರಿ ರಚಿಸಿ ಬಿಡುಗಡೆ ಮಾಡಿದ್ದಾರೆ. ಬಸವ ಜ್ಯೋತಿ ಸೇರಿದಂತೆ ಮೂರು ಪುಸ್ತಕಗಳಲ್ಲಿ ಬರೋಬರಿ 2 ಸಾವಿರಕ್ಕೂ ಅಧಿಕ ವಚನಗಳನ್ನು ಬರೆದು ಭಕ್ತಿಯ ಸಾರವನ್ನು ತಿಳಿಸುವ ಪ್ರಯತ್ನ ನಡೆಸಿದ್ದಾರೆ. ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದಿದ್ದ ಮಲ್ಲಿಕಾ ಮಹದೇವಪ್ಪ ಅವರು ಪತಿ ನಿವೃತ್ತ ಶಿಕ್ಷಕರಾಗಿದ್ದ ಮಹದೇವಪ್ಪ ಅವರ ಸಹಕಾರದೊಂದಿಗೆ ತಮ್ಮ 58ನೇ ವಯಸ್ಸಿನಲ್ಲಿ ಎಂ.ಎ.ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ತನ್ನ ಕಾರ್ಯ ದಕ್ಷತೆಯನ್ನು ಪ್ರದರ್ಶಿಸಿದ್ದಾರೆ.

ADVERTISEMENT

ಕವನ ಸಂಕಲನಗಳು:ಗ್ರಂಥಗಳನ್ನು ಬರೆದು ಜನಮಾನಸದಲ್ಲಿ ಹೆಸರಾಗಿರುವ ಸಾಹಿತಿ ಮಲ್ಲಿಕಾ ಮಹದೇವಪ್ಪ ಅವರನ್ನು ಮಲ್ಲಿಕಾ ಮಳವಳ್ಳಿ ಎಂದೂ ಕರೆಯಲಾಗುತ್ತಿದೆ. ಅವರ ಸಾಹಿತ್ಯ ಲೋಕದ ಸಾಧನೆಗಾಗಿ 2022ರಲ್ಲಿ ರಾಜ್ಯ ಮಟ್ಟದ ಶಕುಂತಲಾ ಜಯದೇವ ಶರಣ ಪ್ರಶಸ್ತಿಗೆ ಬಂದಿದೆ. ಜತೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪುರಸ್ಕಾರ ಸೇರಿದಂತೆ ಅನೇಕ ಗೌರವ ಸಂಪಾದಿಸಿದ್ದಾರೆ. ಹಲಗೂರಿನ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಳಿ ವಯಸ್ಸಿನಲ್ಲೂ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಹಿಳಾ ಸಾಧಕಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.