ಮೈಸೂರು: ರಾಜ್ಯದಲ್ಲಿರುವ ಮಾದಕವಸ್ತು ಜಾಲದಲ್ಲಿ 32 ರಾಜಕಾರಣಿಗಳು ಶಾಮೀಲಾಗಿದ್ದು, ಇವರ ವಿರುದ್ಧ ಗೃಹಸಚಿವರಿಗೆ ನೇರವಾಗಿ ದೂರು ಸಲ್ಲಿಸಲಾಗುವುದು ಎಂದು ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಇದು ಕೇವಲ ಒಂದು ಮಾಫಿಯಾ ಅಲ್ಲ. ಪಾಕಿಸ್ತಾನದಿಂದ ದಾವೂದ್ ಇಬ್ರಾಹಿಂ ನಡೆಸುತ್ತಿರುವ ಡ್ರಗ್ಸ್ ಜಿಹಾದ್. ಇದರ ಉದ್ದೇಶ ಯುವಜನರನ್ನು ನಿರ್ವೀರ್ಯಗೊಳಿಸುವುದಾಗಿದೆ. ಈ ಜಾಲದೊಳಗೆ ಸಿಲುಕಿರುವ ರಾಜಕಾರಣಿಗಳು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ನಲ್ಲಿದ್ದಾರೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿಗೆ ಸೇರಿದ ಬಹುತೇಕ ಬಿಬಿಎಂಪಿ ಸದಸ್ಯರ ಪುತ್ರರು ಪಬ್ ಹಾಗೂ ಕ್ಲಬ್ಗಳನ್ನು ನಡೆಸುತ್ತಿದ್ದಾರೆ. ಇಲ್ಲೆಲ್ಲ ಮಾದಕವಸ್ತುಗಳು ಸಿಗುತ್ತಿವೆ. ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತೆಸೆಯುತ್ತೇವೆ ಎಂದು ಹೇಳುವ ಮೂಲಕ ರಾಜಕಾರಣಿಗಳು ಬುರುಡೆ ಬಿಡುತ್ತಿದ್ದಾರೆ ಎಂದರು.
ಮೈಸೂರಿನ ಪ್ರತಿಷ್ಠಿತ ಕಾಲೇಜುಗಳ ಕೆಲವು ವಿದೇಶಿ ವಿದ್ಯಾರ್ಥಿಗಳು ಮಾದಕವಸ್ತುಗಳನ್ನು ಸೇವಿಸುತ್ತಾರೆ. ಬೇಕಿದ್ದರೆ ಇವರು ವಾಸ ಇರುವ ಹಾಸ್ಟೆಲ್ಗಳಲ್ಲಿ ತಪಾಸಣೆ ನಡೆಸಲಿ ಎಂದು ಸವಾಲೆಸದರು.
ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಮಾದಕವಸ್ತು ಇದೆ ಎಂಬ ಮಾಹಿತಿ ಕರ್ನಾಟಕದ ಪೊಲೀಸರಿಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಇಲ್ಲಿನ ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿತ್ತಾ ಎಂದು ಹರಿಹಾಯ್ದರು.
ನಟಿ ಸಂಜನಾ ಶಾಸಕ ಜಮೀರ್ ಅಹಮ್ಮದ್ ಸೇರಿದಂತೆ ಹಲವರ ಹೆಸರನ್ನು ಹೇಳಿರುವಾಗ ಅವರ ವಿರುದ್ಧ ಪೊಲೀಸರು ವಿಚಾರಣೆ ನಡೆಸುತ್ತಿಲ್ಲ. ಇದೊಂದು ರೀತಿಯ ಹೊಂದಾಣಿಕೆ ರಾಜಕೀಯ ಎಂದು ಹೇಳಿದರು.
ಬೆಂಗಳೂರಿನ ಶಾಸಕರೊಬ್ಬರ ಪುತ್ರ ತಮ್ಮ ಹೆಸರನ್ನು ಮಾದಕವಸ್ತು ಮಾಫಿಯಾದಲ್ಲಿ ಸಿಲುಕಿಸಿ ಆರೋಪ ಮಾಡಬಾರದು ಎಂದು ನ್ಯಾಯಾಲಯಕ್ಕೆ ಹೋಗಿ ಮನವಿ ಸಲ್ಲಿಸಿದ್ದಾರೆ. ಅವರು ಒಂದು ವೇಳೆ ಪ್ರಾಮಾಣಿಕರಾಗಿದ್ದರೆ ಈ ರೀತಿ ಮನವಿ ಸಲ್ಲಿಸುವ ಅಗತ್ಯವಿತ್ತಾ ಎಂದು ಪ್ರಶ್ನಿಸಿದರು.
ನಟಿ ಕಂಗನಾ ರನೋತ್ ಅವರ ಮನೆಯನ್ನು ನೆಲಸಮಗೊಳಿಸಿರುವುದು ಅಪರಾಧ. ಅವರೊಂದಿಗೆ ಶ್ರೀರಾಮ ಸೇನೆ ಇದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.