ಜಯಪುರ: ಕೊರೊನಾದಿಂದ ದುಡಿಯುವ ವರ್ಗಕ್ಕೆಬಹಳಷ್ಟು ತೊಂದರೆಯಾಗಿದ್ದು, ಜೀವನೋಪಾಯಕ್ಕಾಗಿ ಹಲವು ಮಾರ್ಗಗಳನ್ನು ಹಿಡಿಯುವಂತೆ ಮಾಡಿದೆ.ಮೈಸೂರು ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ಕಲಾವಿದ ಲೋಕೇಶ್ ಅವರು ಕೃಷಿಯತ್ತ ಆಕರ್ಷಿತರಾಗಿ ಬದುಕು ಕಂಡುಕೊಳ್ಳುತ್ತಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರದ ವಿಜಯ ಕಾಲೇಜು, ಮೈಸೂರಿನ ವಿವಿಧ ಖಾಸಗಿ ಶಾಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹದಿನೈದು ವರ್ಷಗಳಿಂದಲೂ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಅಲಂಕಾರ ಮಾಡುವ ಕಲಾವಿದರೂ ಇವರೇ.
ಕೊರೊನಾ ಸಂಕಷ್ಟದಿಂದ ಶಾಲೆಗಳು ತೆರೆಯದೆ ಬಾಗಿಲು ಮುಚ್ಚಿವೆ. ಉದ್ಯೋಗವಿಲ್ಲದೇ ಸುಮ್ಮನಿರುವುದಕ್ಕಿಂತ ಮೂರು ಎಕರೆ ಸ್ವಂತ ಭೂಮಿಯಲ್ಲಿ ಕೃಷಿ ಮಾಡಲು ನಿರ್ಧರಿಸಿದರು.
‘ಜಯಪುರ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಜಾಬ್ ಕಾರ್ಡ್ ಮಾಡಿಸಿಕೊಂಡೆ. ಯೋಜನೆಯಡಿ ಕೃಷಿ ಹೊಂಡ ತೆಗೆಸಿದೆ. ಉತ್ತಮ ಮಳೆಯಾದ್ದರಿಂದ ಕೃಷಿ ಹೊಂಡ ನೀರಿನಿಂದ ತುಂಬಿದ್ದು, ಜಮೀನಿನಲ್ಲಿ ತರಕಾರಿ ಮತ್ತು ತೋಟಗಾರಿಕೆ ಬೆಳೆ ಬೆಳೆಯಲು ನಿರ್ಧರಿಸಿದ್ದೇನೆ’ ಎಂದು ಲೋಕೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಪಟ್ಟಣದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟವಾಯಿತು. ಕುಟುಂಬ ಸದಸ್ಯರನ್ನು ನೋಡಿಕೊಳ್ಳಲು ಕೃಷಿ ಮಾಡಲು ಮುಂದಾಗಿದ್ದೇನೆ. ಈ ಕ್ಷೇತ್ರದಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ’ ಎಂದರು.
‘ನರೇಗಾದಡಿ ಕೃಷಿ ಹೊಂಡ ತೆಗೆಸಲು ಲೋಕೇಶ್ ಅವರಿಗೆ ಸಲಹೆ ನೀಡಿದೆ. ಕಲಾವಿದ ಲೋಕೇಶ್ ಕೃಷಿಯತ್ತ ಆಸಕ್ತಿ ವಹಿಸಿರುವುದು ಇತರೆ ರೈತರಿಗೆ ಸ್ಫೂರ್ತಿಯಾಗಿದೆ’ ಎಂದು ಪಿಡಿಒ ನರಹರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.