
ಮೈಸೂರು: ಅವಧಿ ಮೀರಿದ್ದರೂ ವಿದ್ಯುತ್ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಂದ ವಸೂಲಾತಿಗೆ ಸೆಸ್ಕ್ನಿಂದ ಅಭಿಯಾನ ಕೈಗೊಳ್ಳಲಾಗುತ್ತಿದೆ.
ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸದ ಗ್ರಾಹಕರಿಂದ ವಿದ್ಯುತ್ ಬಿಲ್ ಬಾಕಿ ವಸೂಲಾತಿ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಪ್ರಕಾರ ವಿದ್ಯುತ್ ಸರಬರಾಜಿನ, ವಿತರಣಾ ಲೈಸೆನ್ಸ್ದಾರರ ಷರತ್ತುಗಳು 2004ರ ಅನುಬಂಧ-04ರ ನಿಯಮ 4.18(ಜೆ) ಪ್ರಕಾರ ಗ್ರಾಹಕರು ಬಿಲ್ ಪಾವತಿಗೆ ನೀಡಿರುವ ದಿನಾಂಕದೊಳಗೆ ಬಿಲ್ ಪಾವತಿಸದಿದ್ದರೆ, ನಿಗದಿತ ಗಡುವಿನ ದಿನಾಂಕದ ನಂತರ ಶುಲ್ಕ ಪಾವತಿಸದ ಗ್ರಾಹಕರಿಗೆ 15 ದಿನಗಳ ಸ್ಪಷ್ಟ ನೋಟಿಸ್ ನೀಡಿ, ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಲೈಸೆನ್ಸ್ದಾರರು ಹೊಂದಿರುತ್ತಾರೆ. ಅಲ್ಲದೇ ನಿಯಮ 2.11ರ ಪ್ರಕಾರ ಬಿಲ್ ವಿತರಿಸಿದ ಬಳಿಕ 15 ದಿನಗಳ ಅವಧಿ ಬಿಲ್ ಪಾವತಿಗೆ ಅಂತಿಮ ಗಡುವಾಗಿರುತ್ತದೆ ಎಂದು ಸೆಸ್ಕ್ ತಿಳಿಸಿದೆ.
‘ಗ್ರಾಹಕರಿಗೆ ನೀಡುವ ಮಾಸಿಕ ಬಿಲ್ನ ಹಿಂಬದಿಯ ಸೂಚನೆ 1ರಲ್ಲಿ ನಿಗದಿತ ದಿನದೊಳಗೆ ಬಿಲ್ ಪಾವತಿಸದಿದ್ದಲ್ಲಿ ಈ ಬಿಲ್ ಅನ್ನೇ ವಿದ್ಯುತ್ ಸರಬರಾಜು ನಿಲ್ಲಿಸುವ 15 ದಿನಗಳ ನೋಟೀಸ್ ಎಂದು ಪರಿಗಣಿಸಬೇಕು ಎಂದು ನಮೂದಿಸಲಾಗಿದೆ ಹಾಗೂ ಹಿಂದಿನ ಬಾಕಿಗೆ ವಾಯ್ದೆ ದಿನಾಂಕ ಅನ್ವಯಿಸುವುದಿಲ್ಲ’ ಎಂದು ತಿಳಿಸಲಾಗಿದೆ.
ಈ ಕಾರಣದಿಂದ ನ.14ರಂದು ಕಂದಾಯ ವಸೂಲಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಪ್ರವರ್ಗದ ವಿದ್ಯುತ್ ಗ್ರಾಹಕರು, ಸರ್ಕಾರಿ ಇಲಾಖೆ ಒಳಗೊಂಡಂತೆ ತಮ್ಮ ಮೀಟರ್/ಮಾಪಕಗಳ ವಿದ್ಯುತ್ ಶುಲ್ಕ ಬಾಕಿಯನ್ನು ನ. 14 ರೊಳಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಅಧಿಕೃತ ನಗದು ಕೌಂಟರ್ ಅಥವಾ ಆನ್ ಲೈನ್ ಮೂಲಕ ಪಾವತಿಸುವಂತೆ ಕೋರಲಾಗಿದೆ.
ನಿಗದಿತ ದಿನಾಂಕದೊಳಗೆ ವಿದ್ಯುತ್ ಶುಲ್ಕ ಬಾಕಿ ಪಾವತಿಸದ ಮೀಟರ್/ಮಾಪಕಗಳಿಗೆ ನ.14 ನಂತರ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಕಡಿತಗೊಳಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ಗ್ರಾಹಕರು ಈ ಕ್ರಮಕ್ಕೆ ಆಸ್ಪದ ನೀಡದೆ ತಮ್ಮ ವಿದ್ಯುತ್ ಮೀಟರ್/ಮಾಪಕಗಳ ವಿದ್ಯುತ್ ಶುಲ್ಕದ ಬಾಕಿಯನ್ನು ತುರ್ತಾಗಿ ಪಾವತಿಸುವಂತೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ್ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಮೀಟರ್/ಮಾಪಕಗಳಿಗೆ (ತುರ್ತು ಸೇವೆಗಳನ್ನು ಹೊರತುಪಡಿಸಿ,) ನಿಯಮಾನುಸಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಆದ್ದರಿಂದ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿರುವ ಗ್ರಾಹಕರು, ತುರ್ತಾಗಿ ತಮ್ಮ ವಿದ್ಯುತ್ ಸ್ಥಾವರದ ಬಾಕಿ ಪಾವತಿಸಿ ಇಲಾಖೆಯೊಂದಿಗೆ ಸಹಕರಿಸಬೇಕು.ಕೆ.ಎಂ. ಮುನಿಗೋಪಾಲ್ ರಾಜು, ವ್ಯವಸ್ಥಾಪಕ ನಿರ್ದೇಶಕ, ಸೆಸ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.