ಮೈಸೂರು: ‘ಸಂವಿಧಾನವು ಮಹಿಳೆಯರಿಗೆ ಅಪಾರವಾದ ಕೊಡುಗೆ ನೀಡಿದೆ. ಮೂಲಭೂತ ಹಕ್ಕುಗಳು, ಸೌಕರ್ಯಗಳನ್ನು ಸಮಾನವಾಗಿ ನೀಡಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ ತಿಳಿಸಿದರು.
ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ‘ನಾವು ಮಾಡುವ ಕೆಲಸದಲ್ಲಿ ನಮ್ಮ ಶ್ರೇಷ್ಠತೆ ಗಳಿಸಬೇಕು’ ಎಂದರು.
‘ಸಂವಿಧಾನ ಜಾರಿಗೆ ಬರುವ ಮುಂಚೆ ಮಹಿಳೆಯರ ಸ್ಥಿತಿಗತಿ ಹೇಗಿತ್ತು ? ಈಗ ಹೇಗಿದೆ’ ಎಂದು ವಿವರಿಸಿದರು.
ಡಿಎಚ್ಒ ಡಾ.ಆರ್.ವೆಂಕಟೇಶ್ ಮಾತನಾಡಿ ಮಕ್ಕಳಿಗೆ ಯಾವ ರೀತಿ ಪೌಷ್ಟಿಕ ಆಹಾರ ಸೇವಿಸಬೇಕು ಎಂಬುದನ್ನು ತಿಳಿಸಿದರು.
‘ಜಂತುಹುಳು ಮುಕ್ತ ಹಾಗೂ ಆರೋಗ್ಯವಂತ ಮಕ್ಕಳಿಗಾಗಿ ಪೌಷ್ಟಿಕ ಆಹಾರ ನೀಡುವುದರ ಬಗ್ಗೆ ತಾಯಂದಿರು ಪಣ ತೊಡಬೇಕು. ಕೋವಿಡ್-19 ಭಯ ಬಿಟ್ಟು ಸುರಕ್ಷಿತವಾಗಿ ಕೆಲಸ ಮಾಡಬೇಕು. ಕನಿಷ್ಠ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಕೆ.ಪದ್ಮಾ, ಜಿಲ್ಲಾ ನಿರೂಪಣಾಧಿಕಾರಿ ಗೀತಾಲಕ್ಷ್ಮೀ, ಆರ್ಸಿಎಚ್ ಅಧಿಕಾರಿ ಡಾ.ರವಿ, ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಆರ್.ಮಧುಸೂಧನ್, ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ವಿ.ಪಾಟೀಲ, ಕೆ.ಆರ್.ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಜೆ.ಮಮತಾ, ಐಡಿಎ ಕನ್ವೀನರ್ ಡಾ.ಸುಷ್ಮಾ ಅಪ್ಪಯ್ಯ, ಕಾರ್ಯದರ್ಶಿ ಡಾ.ವನಿತಾ ರೆಡ್ಡಿ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.