
ಎಚ್.ಡಿ.ಕೋಟೆ: ಜಮೀನುಗಳಿಗೆ ನೀರು ಹರಿಸಲು ಪಂಪ್ಸೆಟ್ಗಳಿಗೆ ಹಗಲು ವೇಳೆಯಲ್ಲಿ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ತಾಲ್ಲೂಕು ರೈತ ಸಂಘದಿಂದ ಪಟ್ಟಣದ ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ರೈತ ಸಂಘದ ಸಹಕಾರ್ಯದರ್ಶಿ ಜಕ್ಕಹಳ್ಳಿ ರವಿಕುಮಾರ್ ಮಾತನಾಡಿ, ‘ತಾಲ್ಲೂಕಿನ ಕಾಡಂಚಿನ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳಿಗೆ ನೀರು ಹರಿಸಲು ಹೋಗಿ ಕಾಡು ಪ್ರಾಣಿಗಳ ಬಾಯಿಗೆ ಆಹಾರವಾಗುತ್ತಿದ್ದಾರೆ. ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಪಂಪ್ಸೆಟ್ಗಳಿಗೆ ಹಗಲು ವೇಳೆಯೇ ವಿದ್ಯುತ್ ನೀಡಬೇಕು’ ಎಂದು ಒತ್ತಾಯಿಸಿದರು.
‘ತಾಲ್ಲೂಕಿನಾದ್ಯಂತ ರಾತ್ರಿ ವೇಳೆ ಪಂಪ್ಸೆಟ್ಗಳಿಗೆ ವಿದ್ಯುತ್ ನೀಡುತ್ತಿದ್ದು, ಆನೆ, ಹುಲಿ, ಚಿರತೆ ಹಾವಳಿ ಹೆಚ್ಚಾಗಿದ್ದು, ತಾಲ್ಲೂಕಿನಲ್ಲಿ ನಾಲ್ವರ ಮೇಲೆ ಹುಲಿ ದಾಳಿ ಮಾಡಿ ಮೂವರು ಮೃತಪಟ್ಟಿದ್ದಾರೆ. ಇದರಿಂದಾಗಿ ರೈತರು ರಾತ್ರಿ ಜಮೀನಿಗೆ ತೆರಳಲು ಭಯಭೀತರಾಗಿದ್ದಾರೆ’ ಎಂದು ಅಳಲು ತೋಡಿಕೊಂಡರು.
ಕೆಟ್ಟು ಹೋದ ಟ್ರಾನ್ಸ್ಫಾರ್ಮರ್ಗಳನ್ನ ದುರಸ್ತಿಪಡಿಸಬೇಕು, ಜೊತು ಬಿದ್ದಿರುವ ತಂತಿಗಳನ್ನ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.
ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ವಡ್ಡರಗುಡಿ ಬಸವರಾಜ್ ಮಾತನಾಡಿ, ‘25 ಕೆವಿ ಟ್ರಾನ್ಸ್ಫಾರ್ಮರ್ ಸಂಪರ್ಕದಲ್ಲಿ ಪಂಪ್ಸೆಟ್ಗಳು ಹೆಚ್ಚಾಗಿರುವುದರಿಂದ, 63 ಕೆವಿ ಟಿಸಿಯನ್ನು ಅಳವಡಿಸಬೇಕು ಎಂದರು.
ರೈತರ ಮನವಿ ಸ್ವೀಕರಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದು ಕುಮಾರ್ ಮಾತನಾಡಿ, ‘ಬೆಳಗಿನ ವೇಳೆ ಪಂಪ್ಸೆಟ್ಗಳಿಗೆ ವಿದ್ಯುತ್ ನೀಡಿದರೆ ಸಾಕಷ್ಟು ತೊಂದರೆ ಉಂಟಾಗುತ್ತದೆ. ಸದ್ಯಕ್ಕೆ ರಾತ್ರಿ ವೇಳೆ ವಿದ್ಯುತ್ ನೀಡಲಾಗುತ್ತಿದೆ, ಆದ್ದರಿಂದ ರೈತರು ಸಹಕರಿಸಿ’ ಎಂದು ಹೇಳಿದರು.
ಸೆಸ್ಕ್ ಅಧಿಕಾರಿಗಳಾದ ಅರುಣ್ ಕುಮಾರ್, ವಾದಿರಾಜ್, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಪಳನಿ ಸ್ವಾಮಿ, ತಾಲ್ಲೂಕು ಮಾಜಿ ಅಧ್ಯಕ್ಷ ರವಿಕುಮಾರ್, ಮಹದೇವ, ಮಂಜು, ಗೋವಿಂದೇಗೌಡ, ದೇವಮ್ಮ, ಶಿವಲಿಂಗೇಗೌಡ, ಮಾದೇವ ಶೆಟ್ಟಿ, ಶಿವಣ್ಣ ಶೆಟ್ಟಿ, ಪುಟ್ಟರಾಜು, ರವಿ, ವೆಂಕಟೇಗೌಡ, ಪ್ರಸಾದ್, ಕುಮಾರಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.