ADVERTISEMENT

ಪ್ಲಾಸ್ಮಾ ಬ್ಯಾಂಕ್ ತೆರೆಯಲು ಒತ್ತಾಯ

ಇಂದು ಪ್ಲಾಸ್ಮಾ ದಾನ ಶಿಬಿರ, ಸಿದ್ದರಾಮಯ್ಯ ಅವರಿಂದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 9:15 IST
Last Updated 17 ಸೆಪ್ಟೆಂಬರ್ 2020, 9:15 IST

ಮೈಸೂರು: ಜಿಲ್ಲೆಯಲ್ಲಿ ಪ್ಲಾಸ್ಮಾ ಬ್ಯಾಂಕ್‌ ತೆರೆಯಬೇಕು. ಕನಿಷ್ಠ ಪಕ್ಷ ಪ್ಲಾಸ್ಮಾ ತೆಗೆದು ರೋಗಿಗಳಿಗೆ ನೀಡುವ ವ್ಯವಸ್ಥೆಯಾದರೂ ಜಾರಿಗೆ ಬರಬೇಕು. ಇಲ್ಲದೇ ಹೋದರೆ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಡಾಕ್ಟರ್ ಸೆಲ್‌ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಭರತ್‌ಕುಮಾರ್ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದ್ಯ ಮೈಸೂರಿನವರು ಪ್ಲಾಸ್ಮಾ ತೆಗೆದುಕೊಳ್ಳಲು ಮಂಡ್ಯ ಹಾಗೂ ಬೆಂಗಳೂರಿಗೆ ಹೋಗಬೇಕಾದ ಸ್ಥಿತಿ ಇದೆ. ಕನಿಷ್ಠ ಜಿಲ್ಲಾಡಳಿತ ಈ ವ್ಯವಸ್ಥೆಯನ್ನಾದರೂ ಇಲ್ಲಿ ಕಲ್ಪಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಇದಕ್ಕಾಗಿಯೇ ಪ್ಲಾಸ್ಮಾ ದಾನ ಶಿಬಿರವನ್ನು ಕೆಪಿಸಿಸಿ ಡಾಕ್ಟರ್ ಸೆಲ್‌ ವತಿಯಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಉದಯಗಿರಿಯ ಕೂಬ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಸೆ. 18ರಂದು ಮಧ್ಯಾಹ್ನ 3 ಗಂಟೆಗೆ ಆಯೋಜಿಸಿದೆ. ಇದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ಡಾ.ಹರ್ಷವರ್ಧನ್ ತಿಳಿಸಿದರು.

ADVERTISEMENT

ಲಕ್ಷಣ ಇರುವ ಕೋವಿಡ್‌ ರೋಗಿಗಳು ಗುಣಮುಖರಾದ ಬಳಿಕ ಪ್ಲಾಸ್ಮಾ ದಾನ ಮಾಡಬಹುದು. ಇದರಿಂದ ಒಬ್ಬ ಕೋವಿಡ್ ರೋಗಿಯ ಜೀವವನ್ನು ಉಳಿಸಬಹುದಾಗಿದೆ. ಈಗಾಗಲೇ 90 ಮಂದಿ ದಾನ ಮಾಡುವುದಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಮತ್ತಷ್ಟು ಜನರು ಮೊ: 7892799074, 9535177064, 9880973703 ಸಂಪರ್ಕಿಸುವ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಡಾ.ಶಾಜಿಯಾ ಸುಲ್ತಾನ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.