ADVERTISEMENT

ಪ್ರಭುತ್ವದ ಮೌಲ್ಯ ವಿವೇಚನೆಯೇ ಕನಕಪ್ರಜ್ಞೆ: ಪ್ರೊ.ಪುರುಷೋತ್ತಮ ಬಿಳಿಮಲೆ

‘ಪ್ರಜಾವಾಣಿ’ ಸಹಯೋಗದಲ್ಲಿ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣ: ಪ್ರೊ.ಪುರುಷೋತ್ತಮ ಬಿಳಿಮಲೆ ಪ್ರತಿಪಾದನೆ 

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 19:12 IST
Last Updated 30 ಡಿಸೆಂಬರ್ 2025, 19:12 IST
<div class="paragraphs"><p>ಮೈಸೂರಿನಲ್ಲಿ&nbsp;‘ಪ್ರಜಾವಾಣಿ’ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು.</p></div>

ಮೈಸೂರಿನಲ್ಲಿ ‘ಪ್ರಜಾವಾಣಿ’ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು.

   

ಮೈಸೂರು: ‘ಮಾಧ್ಯಮಗಳು ಪ್ರಭುತ್ವದ ಭಾಷೆಯನ್ನೇ ತಮ್ಮ ಭಾಷೆ ಎಂದುಕೊಂಡಿದ್ದು, ಅವುಗಳಿಗೆ ಕನಕಪ್ರಜ್ಞೆ ಅಗತ್ಯ. ಮಾಧ್ಯಮಗಳು ಪ್ರಭುತ್ವದ ಮೌಲ್ಯವಿವೇಚನೆ, ವಿಮರ್ಶೆಯ ಭಾಷೆಯನ್ನು ರೂಢಿಸಿಕೊಳ್ಳಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು. 

ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ‘ಪ್ರಜಾವಾಣಿ’ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ  ಮಾತನಾಡಿ, ‘ಪರಂಪರೆಯನ್ನು ಗೌರವಿಸುತ್ತಲೇ ಅದರಿಂದ ಸಿಡಿದ ಕನಕದಾಸರು, ತಮ್ಮತನವನ್ನು ಪ್ರತ್ಯೇಕವಾಗಿ ಬೆಳೆಸಿಕೊಂಡ ಗುಣವೇ ಕನಕಪ್ರಜ್ಞೆಯಾಗಿದೆ’ ಎಂದರು. ‌‌

ADVERTISEMENT

‘ಪ್ರಭುತ್ವವು ನಮ್ಮ ಮಿದುಳು, ಭಾಷೆ, ಚಿಂತನಾ ಕ್ರಮವನ್ನೇ ಆಕ್ರಮಿಸಿಕೊಳ್ಳುತ್ತದೆ. ಅದರ ಭಾಷೆಯಲ್ಲೇ ಮಾತನಾಡುವುದನ್ನು ಕೆಲವರು ಕರಗತ ಮಾಡಿಕೊಂಡಿದ್ದಾರೆ. ತನ್ನ ಭಾಷೆಯಲ್ಲಿ ಮಾಧ್ಯಮಗಳು ಮಾತನಾಡಿದಾಗ ಪ್ರಭುತ್ವವು ಸಂಭ್ರಮಿಸುತ್ತದೆ. ಅವರಿಂದ ಅಪಾಯವಿಲ್ಲವೆಂಬ ಪ್ರಜ್ಞೆ ಮೂಡಿದಾಗ ಬೇಕಾದ ಪ್ರಶಸ್ತಿಯನ್ನೂ ನೀಡಿ ಗೌರವಿಸುತ್ತದೆ. ಆದರೆ, ಕನಕಪ್ರಜ್ಞೆ ಇದಕ್ಕೆ ಹೊರತು’ ಎಂದು ವಿವರಿಸಿದರು.  

‘ರಾಮಾಯಣ, ಮಹಾಭಾರತಗಳ ಕಾವ್ಯ ಚೌಕಟ್ಟು ಮೀರಿ ನೈಷಧೀಯ ಚರಿತ್ರೆ ಬರೆದ ಶ್ರೀಹರ್ಷನಂತೆ ಕನಕದಾಸರು ನಳಚರಿತ್ರೆ, ರಾಮಧಾನ್ಯ ಚರಿತೆ ಬರೆದರು. ಕುವೆಂಪು ಅವರೂ ಭಾರತದ ಸಾರ್ವಭೌಮತೆಗೆ ಗೌರವ ತೋರುತ್ತ ಕರ್ನಾಟಕವನ್ನೇ ಕಾವ್ಯವಾಗಿಸಿದರು. ಈ ಮಾದರಿಯಲ್ಲಿ ಪ್ರಭುತ್ವದಿಂದ ಸಿಡಿದು ಭಿನ್ನವಾಗಿ ಮಾತನಾಡಲು ಮಾಧ್ಯಮಗಳು ಶುರು ಮಾಡಿದರೆ, ಅಲ್ಲಿ ಕನಕಪ್ರಜ್ಞೆ ಕಾಣುತ್ತದೆ’ ಎಂದು ವಿಶ್ಲೇಷಿಸಿದರು. ‌‌‌

‘1875ರಲ್ಲಿ ದೇಶದಲ್ಲಿ 374 ಪತ್ರಿಕೆಗಳಿದ್ದವು. ಅವುಗಳಲ್ಲಿ ಸ್ಥಳೀಯ ಭಾಷೆಯ 70 ಪತ್ರಿಕೆಗಳನ್ನು ಬ್ರಿಟಿಷರು ನಿಷೇಧ ಮಾಡಿದ್ದರು. ಈಗಲೂ ರಾಷ್ಟ್ರವಾದಿ ಪತ್ರಕರ್ತ ಎಂದುಕೊಳ್ಳುವವರಿಗೆ ಎಂದಿಗೂ ಪ್ರಭುತ್ವವು ತಲೆಕೆಡಿಸಿಕೊಳ್ಳದು. ಇವ ನಮ್ಮವನೆಂಬ ಪ್ರಜ್ಞೆ ಅದಕ್ಕಿರುತ್ತದೆ’ ಎಂದರು. 

‘ಮಾಧ್ಯಮಗಳು ಕನಕಪ್ರಜ್ಞೆ ಮೈಗೂಡಿಸಿಕೊಂಡರೆ ತೊಂದರೆ ಎದುರಾಗುತ್ತದೆ. ಪತ್ರಿಕೆಯ ಪ್ರಸರಣ, ನೋಡುವವರು ಕಡಿಮೆಯಾಗುತ್ತಾರೆ. ದೇಶದ್ರೋಹಿ ಪಾಕಿಸ್ತಾನಕ್ಕೆ ಹೋಗೆಂದು ವೀಸಾ ಕೊಡುವವರು ಹೆಚ್ಚಾಗುತ್ತಾರೆ. ಏನೇ ಆದರೂ, ಕನಕಪ್ರಜ್ಞೆಯನ್ನು ವಿಸ್ತರಿಸುವ ಧೀಮಂತ ಶಕ್ತಿಯನ್ನು, ಓದುಗ ವರ್ಗವನ್ನು ಸೃಷ್ಟಿಸಿಕೊಳ್ಳುವ ಜವಾಬ್ದಾರಿ ಇಂದಿನ ಪತ್ರಿಕೆಗಳಿಗೆ ಬೇಕಿದೆ. ಅಂಥವನ್ನು ಬೆಳೆಸುವ ನೈತಿಕ ಜವಾಬ್ದಾರಿ ಜನರ ಮೇಲಿದೆ’ ಎಂದರು. 

ಇದಕ್ಕೂ ಮೊದಲು ಎಂ.ಮಹಾಲಿಂಗು ಮತ್ತು ತಂಡದವರು ಕನಕ ಕೀರ್ತನೆ ಗಳನ್ನು ಹಾಡಿದರು. ಚಾರ್ವಿ ಸತೀಶ್‌ ಅವರು ‘ಹರಿಭಕ್ತಿಸಾರ’ ಕಾವ್ಯದ ‘ಕನಕ ಗಮಕ’ ವಾಚನ ಮಾಡಿದರು.

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎನ್‌.ಮಮತಾ, ‘ಪ್ರಜಾವಾಣಿ’ ಮೈಸೂರು ಬ್ಯುರೊ ಮುಖ್ಯಸ್ಥ ಕೆ. ನರಸಿಂಹಮೂರ್ತಿ ಪಾಲ್ಗೊಂಡಿದ್ದರು.   

ಕವಿ ದಾಸ ಸಂತ ಅನುಭಾವಿ ಸಮಾಜ ವಿಜ್ಞಾನಿಯಾಗಿ ಕನಕದಾಸ ಕಾಣುತ್ತಾರೆ. ಕನಕನ ಕಿಂಡಿ ಎಂಬುದು ಬಹುತ್ವದ ನೆಲೆ
ಕಾ.ತ.ಚಿಕ್ಕಣ್ಣ ಅಧ್ಯಕ್ಷ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ

‘ಸಾಮಾಜಿಕ ಹೊಣೆಗಾರಿಕೆ ಪ್ರರ್ದಶಿಸಲಿ’ 

‘ಮಾಧ್ಯಮಗಳಿಲ್ಲದ ಕಾಲದಲ್ಲಿ ಕನಕದಾಸರು ಏಕವ್ಯಕ್ತಿ ಮಾಧ್ಯಮವಾಗಿ ಕೆಲಸ ಮಾಡಿದರು. ಅವರು ಇಂದಿನ ಮಾಧ್ಯಮಗಳಿಗೆ ಮಾದರಿ. ವ್ಯವಸ್ಥೆಯನ್ನು ತಿದ್ದಲು ಪ್ರತಿಭಟಿಸುವ ಪ್ರಶ್ನಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ಮಾಧ್ಯಮಗಳು ಪ್ರದರ್ಶಿಸಬೇಕು’ ಎಂದು ಚಿಂತಕ ಎ.ನಾರಾಯಣ ಹೇಳಿದರು.  ‘ಧರ್ಮ ಭಕ್ತಿ ಅನುಭಾವ’ ಕುರಿತು ವಿಷಯ ಮಂಡಿಸಿ ‘ಎಲ್ಲೆಲ್ಲೂ ದೇವರಿದ್ದಾನೆಂದು ಹೇಳಿದ ಕನಕದಾಸರು ‌‌ಉಡುಪಿಗೆ ಹೋಗಿ ನಾನು ವ್ಯಾಸರಾಯರ ಶಿಷ್ಯ ಕೃಷ್ಣನ ದಾಸ. ನನಗೇಕೆ ದೇವಾಲಯಕ್ಕೆ ಪ್ರವೇಶವಿಲ್ಲವೆಂದರು. ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ’ ಎಂದು ಹೇಳಿ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿದರು. ಅವರು  ವ್ಯವಸ್ಥೆಯೊಳಗಿದ್ದುಕೊಂಡೇ ಧರ್ಮದಲ್ಲಿನ ತಾರತಮ್ಯ ಪ್ರಶ್ನಿಸಿದರು’ ಎಂದು ಉದಾಹರಿಸಿದರು.  ‘ಕರ್ನಾಟಕದ ಗತವೈಭವ ಎಂದರೆ ಹಂಪಿಯ ಕಲ್ಲಿನ ರಥ ನೆನಪಿಗೆ ಬರುವ ಬದಲು ಬಸವಾದಿ ವಚನಕಾರರು ಕನಕದಾಸರು ವ್ಯವಸ್ಥೆಯ ವಿರುದ್ಧ ನಡೆಸಿದ ಪ್ರತಿಭಟನೆ ನೆನಪಾಗಬೇಕು. ಈ ಮಾದರಿಯಲ್ಲಿ ಚರಿತ್ರೆಯನ್ನು ನೋಡಬೇಕು’ ಎಂದು ವಿಶ್ಲೇಷಿಸಿದರು.

‘ಪ್ರತಿಕ್ರಾಂತಿಯ ಭಾಗ ಕನಕ’ 

‘ದೇಶದ ಇತಿಹಾಸ ಕ್ರಾಂತಿ ಮತ್ತು ಪ್ರತಿಕ್ರಾಂತಿಯಿಂದ ಕೂಡಿದೆ. ಕನಕದಾಸರು ಪ್ರತಿಕ್ರಾಂತಿಯ ಭಾಗ. ಬುದ್ಧ ಬಸವಾದಿ ವಚನಕಾರರ ಪ್ರಜ್ಞೆಯ ಮುಂದುವರಿಕೆಯೇ ಕನಕಪ್ರಜ್ಞೆಯಾಗಿದೆ’ ಎಂದು ಪತ್ರಕರ್ತ ಡಿ.ಉಮಾಪತಿ ವಿಶ್ಲೇಷಿಸಿದರು.  ‘ವರ್ತಮಾನದ ತವಕ ತಲ್ಲಣಗಳು: ಕನಕದಾಸರು ಮತ್ತು ಮಾಧ್ಯಮ’ ವಿಷಯ ಮಂಡಿಸಿದ ಅವರು ‘19–20ನೇ ಶತಮಾನದಲ್ಲಿಯೂ ಕನಕ ಮಾದರಿಯ ಪ್ರತಿಭಟನೆ ದೇಶದಲ್ಲಿ ನಡೆದಿದೆ. ಉಡುಪಿ ದೇಗುಲ ಪ್ರವೇಶಕ್ಕೆ ಕನಕ ಪ್ರತಿಭಟನೆ ನಡೆಸಿದಂತೆ ರಾಮನಾಮಿಗಳು ರಾಮನಾಮವನ್ನು ಮೈಮೇಲೆ ಬರೆದುಕೊಂಡರು. ಅದು ಅವರ ಮೈಮೇಲೆ ಇರಬಾರದೆಂದು ಮೇಲ್ವರ್ಗದವರು ಸುಟ್ಟರು. ನ್ಯಾಯಾಲಯದ ಮೆಟ್ಟಿಲೇರಿದ್ದರು’ ಎಂದು ಸ್ಮರಿಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.