ಮೈಸೂರು: 'ನಾಡಿನ ಶ್ರದ್ಧಾಭಕ್ತಿಯ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಧರ್ಮಸ್ಥಳ ಕ್ಷೇತ್ರವನ್ನು ವಿವಾದಿತ ಕೇಂದ್ರವನ್ನಾಗಿಸಲು ಕೆಲವರು ಯತ್ನಿಸುತ್ತಿರುವುದು ವಿಷಾದನೀಯ' ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
'ನಂಬಿಕೆ ಎಂಬುದು ಬಹು ಸೂಕ್ಷ್ಮವಾದ ಸಂಗತಿ. ಅದು ಕನ್ನಡಿಯಿದ್ದಂತೆ. ಒಮ್ಮೆ ಅದು ಒಡೆದು ಹೋದರೆ ಮತ್ತೆ ಸರಿಪಡಿಸಲಾಗುವುದಿಲ್ಲ. ಒಡೆದ ಕನ್ನಡಿಯ ಪ್ರತಿಚೂರಿನಲ್ಲೂ ಪ್ರತ್ಯೇಕ ಪ್ರತ್ಯೇಕ ಬಿಂಬಗಳು ಕಾಣುತ್ತಿರುತ್ತವೆ. ಹೀಗೆ ಕಂಡ ಕಂಡ ಬಿಂಬಗಳನ್ನೆಲ್ಲ ನಂಬಿ ವಿಭಿನ್ನವಾಗಿ ಅರ್ಥೈಸುತ್ತಾ ಹೋಗುವುದು ಸೂಕ್ತವಲ್ಲ. ಒಂದು ಧಾರ್ಮಿಕ ಕ್ಷೇತ್ರದ ಮೇಲೆ ನಿರಂತರವಾಗಿ ಒಂದಲ್ಲ ಒಂದು ವಿವಾದವನ್ನು ಮುನ್ನೆಲೆಗೆ ತರುತ್ತಿರುವ ಪ್ರಯತ್ನಗಳು ಸೂಕ್ತವಾದುವಲ್ಲ' ಎಂದು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
'ಕ್ಷೇತ್ರವು ರಾಜ್ಯವಲ್ಲದೇ ಇಡೀ ಭಾರತದ, ಜಗತ್ತಿನ ಪರಂಪರಾಗತ ಸಹಬಾಳ್ವೆಗೆ ದ್ಯೋತಕ. ಅಲ್ಲಿನ ಶಿವ ದೇವಾಲಯದಲ್ಲಿ ಪೂಜಿಸುವ ಅರ್ಚಕರು ವಿಷ್ಣುವನ್ನೇ ಪರಮ ದೈವವೆಂದು ನಂಬುವ ಮಾಧ್ವ ಸಂಪ್ರದಾಯದವರು, ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಶ್ರಮಣ ಧರ್ಮದ ಜೈನ ಸಮುದಾಯದವರು. ಈ ಮೂರು ವಿಭಿನ್ನ ನಂಬಿಕೆಗಳು ಒಗ್ಗೂಡಿರುವ ಶ್ರೀಕ್ಷೇತ್ರದ ಮೂಲ ದೈವಕ್ಕೆ ಹೆಗ್ಗಡೆ ಕುಟುಂಬದ ಪರಂಪರೆಯವರೆಲ್ಲರೂ ಶ್ರದ್ಧಾ-ಭಕ್ತಿಗಳಿಂದ ನಡೆದುಕೊಳ್ಳುತ್ತಿರುವುದು ಹಾಗೂ ಯಾವುದೇ ಚ್ಯುತಿಬಾರದಂತೆ ನಿರ್ವಹಿಸುತ್ತಿರುವುದು ಹೆಮ್ಮೆ ಪಡುವ ವಿಚಾರ. ಇದು ಭಾವೈಕ್ಯತೆಗೆ ನಿಜವಾದ ತೋರುಗನ್ನಡಿ' ಎಂದಿದ್ದಾರೆ.
'ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು 'ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ' ಮೂಲಕ ಗ್ರಾಮೀಣ ಜನರ ಬದುಕನ್ನು ಸಮೃದ್ಧಗೊಳಿಸಿದ್ದಾರೆ. ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಮೂಲಸೌಕರ್ಯ, ದೇವಾಲಯಗಳ ಜೀಣೋದ್ಧಾರ, ಮಂಜೂಷಾ ವಸ್ತುಸಂಗ್ರಹಾಲಯದ ಮೂಲಕ ಪ್ರಾಚೀನ ವಸ್ತುಗಳು, ಸ್ಮರಣಿಕೆಗಳು ಹಾಗೂ ಹಸ್ತಪ್ರತಿಗಳ ಸಂಗ್ರಹ ಮತ್ತು ಪ್ರದರ್ಶನ ವ್ಯವಸ್ಥೆ ಮಾಡಿದ್ದಾರೆ. ಸ್ತ್ರೀಶಕ್ತಿ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಭದ್ರತೆಯನ್ನು ಹೆಚ್ಚಿಸಿದ್ದಾರೆ. 1972 ರಿಂದಲೂ ಸಾಮೂಹಿಕ ವಿವಾಹ ನಡೆಸಿರುವುದು ಅನುಕರಣೀಯ' ಎಂದು ಶ್ಲಾಘಿಸಿದ್ದಾರೆ.
'ಇಂತಹ ಪವಿತ್ರ ಕ್ಷೇತ್ರದ ಪರಿಸರದಲ್ಲಿ ನಡೆದ ಕೆಲವು ಅಸಹಜ ಸಾವಿನ ಪ್ರಕರಣಗಳು ಗಂಭೀರವಾದುವೇ ಆಗಿರಬಹುದು. ಆದರೆ ಇಂತಹ ಪ್ರಕರಣಗಳನ್ನು ಶ್ರೀಕ್ಷೇತ್ರದೊಂದಿಗೆ ತಳಕು ಹಾಕಲು ಪ್ರಯತ್ನಿಸುವುದು ದುಡುಕಿನ ನಿರ್ಧಾರವಾಗುತ್ತದೆ. ಇಂಥ ಕೃತ್ಯಗಳನ್ನು ಸಮಗ್ರವಾಗಿ ತನಿಖೆ ಮಾಡಿ ಸತ್ಯ ಅನಾವರಣ ಮಾಡಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅದಕ್ಕಾಗಿ ವಿಶೇಷ ತನಿಖಾ ತಂಡ ರಚಿಸಿದೆ. ಕ್ಷೇತ್ರದ ಬಗ್ಗೆ ಭಕ್ತಿ ಮತ್ತು ಶ್ರದ್ಧೆಯನ್ನು ಹೊಂದಿರುವ ಸದ್ಭಕ್ತರು ಶಾಂತಿ ಮತ್ತು ಸಂಯಮದಿಂದ ಇರಬೇಕಾದುದು ಅಗತ್ಯ. ಹಾಗೆಯೇ ನ್ಯಾಯಕ್ಕಾಗಿ ಆಗ್ರಹಿಸುವವರು ಕೂಡ ಯಾವುದೇ ಪೂರ್ವಾಗ್ರಹಗಳಿಗೆ ಒಳಗಾಗದೆ ತನಿಖೆ ಪೂರ್ಣವಾಗುವವರೆಗೆ ಅಸಹನೆಗೊಳ್ಳದೆ ತಾಳ್ಮೆಯಿಂದ ಇರಬೇಕಾದುದೂ ಅಗತ್ಯ. ಯಾವುದನ್ನೇ ಆಗಲಿ ಒಡೆಯುವುದು ಸುಲಭ, ಕಟ್ಟುವುದು ಕಷ್ಟ ಎಂಬುದನ್ನು ಎಲ್ಲರೂ ಅರಿಯಬೇಕು. ಸರ್ಕಾರ ಆದಷ್ಟು ಶೀಘ್ರವಾಗಿ ಕೂಲಂಕಷವಾಗಿ ತನಿಖೆ ನಡೆಸಿ ಸತ್ಯವನ್ನು ಪತ್ತೆ ಹಚ್ಚಬೇಕು' ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.