ಡಿಕೆಶಿ
ಮೈಸೂರು: ‘ಡಿ.ಕೆ. ಶಿವಕುಮಾರ್ ಅವರಿಗೆ ಈಗಿರುವುದು ಕೊನೆಯ ಅವಕಾಶ. ಈಗ ಮುಖ್ಯಮಂತ್ರಿ ಆಗದಿದ್ದರೆ ಮುಂದೆ ಆಗುವುದಿಲ್ಲ. ಒಪ್ಪಂದವೇ ಆಗಿದ್ದರೆ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಕೊಡಬೇಕು’ ಎಂದು ಜೆಡಿಎಸ್ ಶಾಸಕ ಎ.ಮಂಜು ಹೇಳಿದರು.
ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ಕಾರಣದಿಂದಲೇ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಕಾಂಗ್ರೆಸ್ಗೆ ಮತ ಹಾಕಿದರು. ಈ ಕಾರಣದಿಂದಲೇ ಆ ಪಕ್ಷಕ್ಕೆ 30ರಿಂದ 40 ಸೀಟುಗಳು ಏರಿಕೆಯಾದವು. ನಾವು ಮೋಸ ಹೋದೆವು ಎಂದು ಜನರಿಗೆ ಈಗ ಅರ್ಥವಾಗುತ್ತಿದೆ’ ಎಂದರು.
‘ಕಾಂಗ್ರೆಸ್ ಮಧ್ಯರಾತ್ರಿ 12ಕ್ಕೆ ಹುಟ್ಟಿದ ಪಕ್ಷ. ಅಲ್ಲಿ ರಾತ್ರೋರಾತ್ರಿ ಏನು ಬೇಕಾದರೂ ಬದಲಾಗುತ್ತದೆ. 2013ರಲ್ಲಿ ಇದ್ದಂತಹ ಸಿದ್ದರಾಮಯ್ಯ ಈಗಿಲ್ಲ. ಅವರು ಸಂಪುರ್ಣವಾಗಿ ಬದಲಾಗಿದ್ದಾರೆ. ಕಾಂಗ್ರೆಸ್ನಲ್ಲಿ ಶಾಸಕರಿಂದ ಏನೂ ತೀರ್ಮಾನ ಆಗುವುದಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಹೇಳಿದರು.
‘ಯಾರೇ ಮುಖ್ಯಮಂತ್ರಿಯಾದರೂ ಜೆಡಿಎಸ್–ಬಿಜೆಪಿಯ ನಮಗೇನೂ ಸಮಸ್ಯೆ ಇಲ್ಲ. ನಾವು 2028ಕ್ಕೆ ಅಧಿಕಾರಕ್ಕೆ ಬಂದೇ ಬರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಪದೇ ಪದೇ ಏಕೆ ಹೇಳುತ್ತಿದ್ದಾರೆಯೋ ಗೊತ್ತಾಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ದುಡ್ಡಿಲ್ಲ. ಇದನ್ನು ಮರೆ ಮಾಚಲು ಈ ರೀತಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.
‘ಜಿ.ಟಿ. ದೇವೇಗೌಡರು ನಮ್ಮ ಪಕ್ಷದಲ್ಲಿದ್ದಾರೆ. ಮನೆ ಎಂದ ಮೇಲೆ ಸಮಸ್ಯೆಗಳು ಇರುತ್ತವೆ. ನಂತರ ಎಲ್ಲವೂ ಬದಲಾಗುತ್ತವೆ. ಚುನಾವಣೆ ಬಂದಾಗ ನಾವೆಲ್ಲಾ ಒಟ್ಟಾಗಿ ಸೇರಿಕೊಳ್ಳುತ್ತೇವೆ. ಯಾವ ಸಮಸ್ಯೆಗಳೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.