ಮೈಸೂರು: ಲೋಕಸಭೆ ಮತದಾನದ ವೇಳೆ ಕೆಲವು ಮತದಾರರು ತಾವು ಚಲಾಯಿಸಿದ ಮತವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ವಾಟ್ಸ್ಆ್ಯಪ್ನಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಮತದಾನದ ಗೌಪ್ಯತೆ ಬಹಿರಂಗಗೊಂಡಂತಾಗಿದೆ.
ಹಲವು ಮತಗಟ್ಟೆಗಳಲ್ಲಿ ಮೊಬೈಲ್ಗಳಿಗೆ ನಿರ್ಬಂಧ ಇರಲಿಲ್ಲ. ಕನಿಷ್ಠ ಸ್ವಿಚ್ಡ್ಆಫ್ ಮಾಡಿ ಎಂದೂ ಮತಗಟ್ಟೆ ಅಧಿಕಾರಿಗಳು ಹೇಳಲಿಲ್ಲ. ಹೀಗಾಗಿ, ಮತಗಟ್ಟೆಗೆ ಸಲೀಸಾಗಿ ಮೊಬೈಲ್ಗಳನ್ನು ತೆಗೆದುಕೊಂಡು ಹೋದವರು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ತಾವು ಮತ ಚಲಾಯಿಸುತ್ತಿರುವ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ನಂತರ, ಇವುಗಳನ್ನು ವಾಟ್ಸ್ಆ್ಯಪ್ನಲ್ಲಿ ಹಂಚಿಕೊಂಡಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್, ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಗುರುತಿನ ಮುಂದೆ ಗುಂಡಿ ಒತ್ತುತ್ತಿರುವ ಚಿತ್ರಗಳು ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರ ಜತೆಗೆ, ಮಂಡ್ಯ ಲೋಕಸಭಾ ಕ್ಷೇತ್ರದ ಸುಮಲತಾ ಅವರಿಗೆ ಮತ ಚಲಾಯಿಸುತ್ತಿರುವ ಚಿತ್ರಗಳೂ ಇವೆ.
ತಾವು ಮತದಾನ ಮಾಡಿರುವುದನ್ನು ಹಣ ನೀಡಿದವರಿಗೆ ತೋರಿಸಲೆಂದು ಮಾಡಿರುವ ತಂತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಮತದಾನದ ಗೌಪ್ಯತೆಗೆ ಧಕ್ಕೆ ಉಂಟಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.