ಹುಣಸೂರು/ಹನಗೋಡು: ತಾಲ್ಲೂಕಿನ ಅಸ್ವಾಳು, ಹನಗೋಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಬಾಳೆ ತೋಟ ಮತ್ತು ಬಿದಿರು ಹಿಂಡಲು ಸೇರಿದಂತೆ ತೆಂಗಿನ ತೋಟ ಬೆಂಕಿ ಕೆನ್ನಾಲಿಗೆಗೆ ಸುಟ್ಟ ಘಟನೆ ಭಾನುವಾರ ಸಂಭವಿಸಿದೆ.
ಬಿಳಿಕೆರೆ ಹೋಬಳಿ ದೈತ್ಯನಕೆರೆ ಕಾವಲಿನ ಪ್ರಗತಿಪರ ರೈತ ಶಿವಕುಮಾರ್ ಅವರಿಗೆ ಸೇರಿದ 2 ಎಕರೆ ಬಾಳೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಭಸ್ಮವಾಗಿದೆ. ಇವರ ತೋಟಕ್ಕೆ ಹೊಂದಿಕೊಂಡಿದ್ದ 1 ಎಕರೆ ಬಾಳೆ ತೋಟಕ್ಕೂ ಬೆಂಕಿ ತಗುಲಿದ್ದು, ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ ಸಂಪೂರ್ಣ ಸುಟ್ಟು ಹೋಗಲಾಗಿ ರೈತ ಶಿವಕುಮಾರ್ ಬೆಳೆದಿದ್ದ ₹ 6 ಲಕ್ಷ ಮೌಲ್ಯದ ಬಾಳೆ ನಷ್ಟವಾಗಿದೆ.
‘ಹನಗೋಡು ಗ್ರಾಮದ ಲಕ್ಷ್ಮಣತೀರ್ಥ ನದಿ ಅಂಚಿನ ಹೊಲದ ರೈತರು ಬೆಳೆಸಿದ್ದ ಬಿದಿರು ಹಿಂಡಲು ಅಥವಾ ಮೆಳೆಗೆ ಆಕಸ್ಮಿಕ ಬೆಂಕಿ ತಗಲಿ ಅಂದಾಜು ₹ 2 ಲಕ್ಷ ನಷ್ಟವಾಗಿದೆ. ಗ್ರಾಮಸ್ಥರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದಾಗ ಇಲಾಖೆಯ ಒಂದು ವಾಹನ ಕೆಟ್ಟಿದ್ದು, ಮತ್ತೊಂದು ದೈತ್ಯನ ಕೆರೆ ಕಾವಲಿನ ಬಾಳೆ ತೋಟಕ್ಕೆ ಹೋಗಿದೆ ಎಂದು ಸಿಬ್ಬಂದಿ ತಿಳಿಸಿದರು’ ಎಂದು ರೈತರಾದ ರಾಜಣ್ಣ, ಸತೀಶ್ ಮತ್ತು ಮಹೇಂದ್ರ ಆರೋಪಿಸಿದರು.
ಬೆಂಕಿ ಹತೋಟಿಗೆ ತರಲು ಸ್ಥಳಿಯ ರೈತರು ನೆರೆಯವರ ಪಂಪ್ ಸೆಟ್ ನೀರು ಬಳಸಿದರು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.