ಮೈಸೂರು: ಟೊಮೆಟೊ ಸಾಗಣೆ ನೆಪದಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರ ಗ್ಯಾಂಗ್ ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಬುಧವಾರ ಇಲ್ಲಿ ತಿಳಿಸಿದರು.
ಆಂಧ್ರಪ್ರದೇಶದಿಂದ ಸೋಮವಾರ ಕೇರಳ ರಾಜ್ಯಕ್ಕೆ ಬೆಂಗಳೂರು-ಮೈಸೂರು- ನಂಜನಗೂಡು ರಸ್ತೆ ಮಾರ್ಗವಾಗಿ ಸರಕು ಸಾಗಣೆ ವಾಹನದಲ್ಲಿ ಟೊಮೆಟೊ ಕ್ರೇಟ್ಗಳ ಮಧ್ಯೆ ಗಾಂಜಾ ಇಟ್ಟು ಸಾಗಿಸುತ್ತಿದ್ದ ಕೇರಳದ ಮಹಮ್ಮದ್ ಶಫಿ, ಸಲೀಂ,ಶಫೀ ಮಜೀದ್, ಇಬ್ರಾಹಿಂ ಕುಟ್ಟಿ ಬಂಧಿಸಲಾಗಿದೆ. ಸಾಗಣೆದಾರರ ಪತ್ತೆಗಾಗಿ ಮತ್ತಷ್ಟು ತನಿಖೆ ನಡೆಸಲಿದ್ದೇವೆ ಎಂದು ಸುದ್ದಿಗೋಷ್ಠಿ ಹೇಳಿದರು.
ಮಾಹಿತಿಯ ಮೇರೆಗೆ ಇನ್ಸ್ಟೆಕ್ಟರ್ ಕೆ.ಆರ್.ರಘು ಅವರನ್ನೊಳಗೊಂಡ ತಂಡ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ, ಗಾಂಜಾ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಆರೋಪಿಗಳಿಂದ ವಾಹನ, 86 ಕೆ.ಜಿ.300 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಿರ್ಗತಿಕನ ಸಾವು-ಕೊಲೆ ಶಂಕೆ
ಮೈಸೂರು: ನಿರ್ಗತಿಕ ವ್ಯಕ್ತಿಯೊಬ್ಬರು ಮೆಟ್ರೊ ಪೋಲ್ ಬಳಿ ಇರುವ ಬಸ್ ತಂಗುದಾಣದಲ್ಲಿ ಅನುಮಾನಾಸ್ಪದವಾಗಿ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯ ಬಳಿ ಅಪಾರ ಸಂಖ್ಯೆಯಲ್ಲಿ ವಿವಿಧ ವ್ಯಕ್ತಿಗಳ ಪಾನ್ ಕಾರ್ಡ್, ವೋಟರ್ ಕಾರ್ಡ್ ಸೇರಿದಂತೆ ಹಲವು ಗುರುತಿನ ಚೀಟಿಗಳು ಪತ್ತೆಯಾಗಿವೆ. ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.